ತಾಳಿಕೋಟೆ: ಪಟ್ಟಣ ಹಾಗೂ ಡೋಣಿ ನದಿ ಜಲಾನಯನ ಪ್ರದೇಶದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಡೋಣಿ ನದಿಗೆ ಶುಕ್ರವಾರ ಬೆಳಿಗ್ಗೆಯಿಂದಲೇ ಪ್ರವಾಹ ಬಂದಿತ್ತು.
ಹಡಗಿನಾಳ ರಸ್ತೆಯಲ್ಲಿರುವ ನೆಲಮಟ್ಟದ ಸೇತುವೆ ಮೇಲೆ ನಾಲ್ಕು ಅಡಿಗೂ ಹೆಚ್ಚಿನ ಪ್ರವಾಹವಿದ್ದುದರಿಂದ ಇಡೀ ದಿನ ಸಂಚಾರಕ್ಕೆ ವ್ಯತ್ಯಯವಾಯಿತು. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಮುದ್ದೇಬಿಹಾಳ ನಾಲತವಾಡ ಕಲ್ಲದೇವನಹಳ್ಳಿ, ಮೂಕಿಹಾಳ, ಶಿವಪುರ ಸೇರಿದಂತೆ ಅನೇಕ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿತು. ಇದರಿಂದಾಗಿ ಎಲ್ಲ ವಾಹನಗಳು ಮಿಣಜಗಿ ಮಾರ್ಗದ ಮೂಲಕ ಸಂಚರಿಸುವಂತಾಯಿತು.
ಸೇತುವೆ ಎತ್ತರಕ್ಕೆ ಹೆಚ್ಚಿದ ಬೇಡಿಕೆ: ಮಳೆಗಾಲದಲ್ಲಿ ಪದೇ ಪದೇ ಈ ಮಾರ್ಗ ಪ್ರವಾಹದಿಂದ ಮುಚ್ಚಿ ಹೋಗುತ್ತಿರುವುದರಿಂದ ಈ ಸೇತುವೆಯನ್ನು ಎತ್ತರ ಮಾಡಬೇಕು ಎಂದು ಜನತೆ ಆಗ್ರಹಿಸಿದ್ದಾರೆ.
ದುರಸ್ತಿಯಾಗದ ಮುಖ್ಯ ಸೇತುವೆ: ರಾಜ್ಯ ಹೆದ್ದಾರಿಯಲ್ಲಿರುವ ಮುಖ್ಯ ಸೇತುವೆ ಶಿಥಿಗೊಂಡಿದ್ದು ಅದರ ದುರಸ್ತಿ ಕಾರ್ಯ ಆಮೆಗತಿಯಲ್ಲಿ ಸಾಗಿದೆ. ಪ್ರಸ್ತುತ ಬ್ರಿಟಿಷ್ ಕಾಲದ ಸೇತುವೆ ಮೇಲೆ ನಿಧಾನಕ್ಕೆ ಸಂಚಾರ ನಡೆದಿದೆ.