ಚಾಮರಾಜನಗರ: ಕಳೆದ ವಾರ ಸುರಿದ ಮಳೆಗೆ ಎಲ್ಲೆಂದರಲ್ಲಿ ನೀರು ನುಗ್ಗಿ ಜಿಲ್ಲಾ ಕೇಂದ್ರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಸಮರ್ಪಕವಾಗಿ ಮಳೆ ನೀರು ಚರಂಡಿ ಇಲ್ಲದಿರುವುದೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿತ್ತು.
ಜನರ ಆಕ್ರೋಶದ ಮಾತುಗಳಿಗೆ ಎಚ್ಚೆತ್ತುಕೊಂಡಂತೆ ನಗರದ ಎಲ್ಐಸಿ ವೃತ್ತದ ಬಳಿ ಮಳೆನೀರು ಚರಂಡಿ ಕಾಮಗಾರಿಗೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಶುಕ್ರವಾರ ಚಾಲನೆ ನೀಡಿದರು.
ನಗರಸಭೆ ವ್ಯಾಪ್ತಿಗೆ ಬರುವ ವಾರ್ಡ್ಗಳ ಅಭಿವೃದ್ಧಿಗೆ ನಗರೋತ್ಥಾನ (ಸಿಎಂಎಸ್ಎಂಟಿಡಿಪಿ ಹಂತ- 2) ಯೋಜನೆಯಡಿ ಕಾಂಕ್ರಿಟ್ ರಸ್ತೆ, ಡಾಂಬರ್ ರಸ್ತೆ, ಮಳೆನೀರು ಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಿದರು.
ಪುಟ್ಟರಂಗಶೆಟ್ಟಿ ಮಾತನಾಡಿ, ‘ನಗರೋತ್ಥಾನ ಯೋಜನೆಯಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಗುಣಮಟ್ಟದ ಕೆಲಸ ಮಾಡಿಸಲು ಅಧಿಕಾರಿಗಳು ಶ್ರಮಿಸಬೇಕು’ ಎಂದು ಸೂಚಿಸಿದರು.
ಮೊದಲ ಹಂತದಡಿ ₨ 1.50 ಕೋಟಿ ವೆಚ್ಚದಡಿ ಆರ್ಟಿಓ ಕಚೇರಿ ಮುಂಭಾಗದಿಂದ ಜಿಲ್ಲಾ ಕ್ರೀಡಾಂಗಣದವರೆಗೆ, ಜಿಲ್ಲಾ ಕ್ರೀಡಾಂಗಣದಿಂದ ಎಲ್ಐಸಿ ಕಚೇರಿವರೆಗೆ, ಐಒಸಿ ಪೆಟ್ರೋಲ್ ಬಂಕ್ವರೆಗೆ ಹಾಗೂ ವಾರ್ಡ್್ ನಂ. 16ರ ಜೆಮ್ಸ್ ವೆಸ್ಲಿಯವರ ಮನೆಯಿಂದ ದೊಡ್ಡಮೋರಿವರೆಗೆ, ರೈಲ್ವೆ ಬಡಾವಣೆಯಿಂದ ಕೇಂದ್ರೀಯ ವಿದ್ಯಾಲಯದ ಶಾಲೆಯ ಮೂಲೆವರೆಗೆ ಮಳೆ ನೀರು ಚರಂಡಿ ನಿರ್ಮಿಸಲಾಗುವುದು ಎಂದರು.
ನಗರಸಭೆ ಅಧ್ಯಕ್ಷ ಎಸ್. ನಂಜುಂಡಸ್ವಾಮಿ, ಉಪಾಧ್ಯಕ್ಷೆ ವಹೀದಾ ಖಾನಂ, ಸದಸ್ಯರಾದ ಮಹೇಶ್, ಗೋಪಾಲ್, ಕೇಶವಮೂರ್ತಿ, ರೇಣುಕಾ, ರಾಜಪ್ಪ, ಚಿನ್ನಸ್ವಾಮಿ, ಶ್ರೀಕಾಂತ್, ರಾಜಶೇಖರ್, ನಾರಾಯಣಸ್ವಾಮಿ, ಬಂಗಾರು, ರಾಜೇಶ್, ಕೆಂಪರಾಜು ಹಾಜರಿದ್ದರು.