ಸಿದ್ದಾಪುರ: ಕುಂದಾಪುರ ತಾಲ್ಲೂಕು ಬೆಳ್ವೆ ಆರ್ಡಿಯಲ್ಲಿ ಗುರುವಾರ ಮುಂಜಾನೆ ಬೀಸಿದ ಬಿರುಗಾಳಿಗೆ ಪರಿಸರದ 100 ಕ್ಕೂ ಹೆಚ್ಚು ಮನೆ ಹಾಗೂ ಅಂಗಡಿ ಮುಗ್ಗಟ್ಟುಗಳಿಗೆ ಹಾನಿ ಯಾಗಿದ್ದು, ಪರಿಹಾರ ಕಾರ್ಯ ಚುರುಕುಗೊಂಡಿದೆ.
ಭಾರಿ ಗಾತ್ರದ ಮರಗಳು ಬುಡ ಸಮೇತ ನೆಲಕ್ಕುರುಳಿದ್ದು, ವಿರಾಜಪೇಟೆ, ಬೈಂದೂರು ರಾಜ್ಯ ಹೆದ್ದಾರಿಯಲ್ಲಿ ಮೈಲುಗಟ್ಟಲೆ ದೂರದಲ್ಲಿ ಮರ ಬಿದ್ದು ರಸ್ತೆ ಸಂಪರ್ಕ ಅಸ್ತವ್ಯಸ್ತಗೊಂಡ ಹಿನ್ನೆಲೆಯಲ್ಲಿ ಜನತೆ ತತ್ತರಿಸಿದೆ.
ಹಟ್ಟಿಯಂಗಡಿ `ನಮ್ಮ ಭೂಮಿ' ಕೇಂದ್ರದಿಂದ ಕಾರ್ಯ ನಿರ್ವಹಣಾ ಧಿಕಾರಿ ದಾಮೋದರ ಆಚಾರ್ಯ, ಸಂಯೋಜಕ ಪ್ರಭಾಕರ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಸ್ವಯಂ ಸೇವಕರು ಆರ್ಡಿ ಪರಿಸರದಲ್ಲಿ ಶ್ರಮದಾನ ಮಾಡಿ ಮರಗಳನ್ನು ತೆರವು ಗೊಳಿಸಿದರು.
ಪರಿಹಾರ ವಿತರಣೆ
ಗುರುವಾರ ವಿವಿಧ ಭಾಗಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಭೇಟಿ ನೀಡಿ ನೊಂದ ಕುಟುಂಬಗಳಿಗೆ ಪರಿಹಾರ ನೀಡಿ ಸಾಂತ್ವನ ಹೇಳಿದರು.
ಪ್ರಕೃತಿ ವಿಕೋಪದಿಂದ ನೊಂದ ಕುಟುಂಬಗಳಿಗೆ ತಲಾ 35 ಸಾವಿರ ಪರಿಹಾರ ಧನ ವಿತರಿಸಿದರು. ಮನೆ ಹಾನಿಗೀಡಾದವರಿಗೆ ಮನೆ ನಿರ್ಮಿಸಲು ಸಹಾಯಧನ ಮಂಜೂರು ಮಾಡುವು ದಾಗಿ ಹೇಳಿದರು.
ರಬ್ಬರ್ ಮರಗಳು, ಕೃಷಿ, ತೋಟಗಾರಿಕೆ ಬೆಳೆ, ಬೆಲೆ ಬಾಳುವ ಮರಮಟ್ಟುಗಳು ನಾಶವಾಗಿರುವುದಕ್ಕೆ ಸರ್ಕಾರದಿಂದ ಪರಿಹಾರ ಧನ ನೀಡಲು ಮುಖ್ಯಮಂತ್ರಿಯವರ ಗಮನಕ್ಕೆ ತರುವುದಾಗಿ ಹೇಳಿದರು.
ಉಡುಪಿ ಜಿಲ್ಲಾಧಿಕಾರಿ ಡಾ. ಎಂ.ಟಿ .ರೇಜು. ಕುಂದಾಪುರ ತಹಶೀಲ್ದಾರ್ ಗಾಯತ್ರಿ ಎನ್. ನಾಯಕ್, ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ಗೋಪಾಲ ಶೆಟ್ಟಿ, ವಿಧಾನಪರಿಷತ್ ಸದಸ್ಯ ಕೆ.ಪ್ರತಾಪ ಚಂದ್ರಶೆಟ್ಟಿ ಇತರರು ಉಪಸ್ಥಿತರಿದ್ದರು.
ಜನಪ್ರತಿನಿಧಿಗಳ ಭೇಟಿ: ತಾಲ್ಲೂಕು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಮೋಗವೀರ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಹೇಮಾವತಿ ಆರ್. ಪೂಜಾರಿ, ಸದಸ್ಯ ಮಂಜು ಬಿಲ್ಲವ, ಚಂದ್ರಾವತಿ ಕೊಠಾರಿ, ಕೈಗಾ ರಿಕಾ ವಿಸ್ತರಣಾಧಿಕಾರಿ ಸೀತಾ ರಾಮ ಶೆಟ್ಟಿ, ತಾಲ್ಲೂಕು ಯುವಜನ ಮತ್ತು ಸೇವಾ ಕ್ರೀಢಾಧಿಕಾರಿ ದಿನಕರ ಹೆಗ್ಡೆ, ತಾಲೂಕು ಪಂಚಾಯಿತಿ ಹೌ ಸಿಂಗ್ ವಿಭಾಗದ ನೋಡೆಲ್ ಅಧಿಕಾರಿ ಪ್ರಿಯ ದರ್ಶನ ಅವರು ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.