ಸಕಲೇಶಪುರ: ಏರುತ್ತಿರುವ ಜಾಗತಿಕ ತಾಪಮಾನ ಕಡಿಮೆ ಮಾಡಲು ಪಶ್ಚಿಮಘಟ್ಟದಂತ ದಟ್ಟ ಮಳೆಕಾಡು ಗಳನ್ನು ಸಂರಕ್ಷಣೆ ಮಾಡಲು ಪ್ರತಿಯೊಬ್ಬರೂ ಕೈಜೋಡಿಸುವ ಅಗತ್ಯವಿದೆ ಎಂದು ರೋಟರಿ 3180 ಡಿಸ್ಟಿಕ್ಟ್ನ ಮುಂದಿನ ಗೌರ್ನರ್ ಡಾ.ಎಸ್.ಭಾಸ್ಕರ್ ಹೇಳಿದರು.
ತಾಲ್ಲೂಕಿನ ಹಾನುಬಾಳು ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳಿಗೆ ಶನಿವಾರ ರಾತ್ರಿ ಪದಗ್ರಹಣ ಮಾಡಿ ಮಾತನಾಡಿದರು. ವಿಶ್ವದಾದ್ಯಂತ ರೋಟರಿ ಸಂಸ್ಥೆಯು ಕಳೆದ 107 ವರ್ಷಗಳಿಂದ ಶಿಕ್ಷಣ, ಪೋಲಿಯೊ ನಿರ್ಮೂಲನೆ, ಪರಿಸರ ಪ್ರಜ್ಞೆ, ಉಚಿತ ಶಿಕ್ಷಣ ಸೇರಿದಂತೆ ಹತ್ತಾರು ಜನಪರ ಕಾರ್ಯ ಕ್ರಮಗಳನ್ನು ಮಾಡುತ್ತಾ ಬಂದಿದೆ. ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯನ ಉಸಿರಾಗಿರುವ ಪಶ್ಚಿಮಘಟ್ಟದ ಕಾಡುಗಳು ಹಂತ ಹಂತವಾಗಿ ನಾಶವಾಗುತ್ತಿವೆ. ಇದ ರಿಂದಾಗಿ ಹವಾಮಾನ ವೈಪರಿತ್ಯ ಉಂಟಾಗಿ ಜಾಗತಿಕ ತಾಪಮಾನ ಏರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ ದರು. ಕಾಡುಗಳನ್ನು ಉಳಿಸುವ ನಿಟ್ಟಿನಲ್ಲಿ ಹವಾಮಾನ ವೈಪರಿತ್ಯ ತಡೆಯುವ ಅಗತ್ಯವಿದೆ ಎಂದರು.
ಸಂಸ್ಥೆಯ ನೂತನ ಅಧ್ಯಕ್ಷ ಎಚ್.ಆರ್. ಸೋಮಯ್ಯ, ಕಾರ್ಯದರ್ಶಿ ಯು.ಎನ್.ನಾಗರಾಜ್ ಹಾಗೂ ಹೊಸ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಹಿಂದಿನ ಸಮಿತಿಯವರಿಂದ ಅಧಿಕಾರ ಹಸ್ತಾಂತರ ಮಾಡಿದರು.
ವೇದಿಕೆಯಲ್ಲಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಎಂ.ಎಲ್. ಜಯಂತ್, ಕಾರ್ಯದರ್ಶಿ ಡಿ.ಈ. ಮದನ್, ವಲಯ 9ರ ರೋಟರಿ ಅಸಿಸ್ಟೆಂಟ್ ಗೌರ್ನರ್ ಸಿ.ಬಿ.ಆನಂದ್ ಇದ್ದರು.