ಧರ್ಮಪುರ: ದಲಿತರು ಮತ್ತು ಶೋಷಿತರು ಸಂಘಟನೆಯಾಗದ ಹೊರತು ಅಭಿವೃದ್ಧಿ ಸಾಧ್ಯವಿಲ್ಲ ಎಂದು ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ರಾಜ್ಯ ಘಟಕದ ಅಧ್ಯಕ್ಷ ಟಿ.ಡಿ. ರಾಜಗಿರಿ ತಿಳಿಸಿದರು.
ಸಮೀಪದ ಅಬ್ಬಿನಹೊಳೆ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ `ದಲಿತರ ಜಾಗೃತಿ~ ಸಮಾವೇಶದಲ್ಲಿ ಅವರು ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಈ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಅಂಥವರನ್ನೇ ಚುನಾವಣೆಯಲ್ಲಿ ಸೋಲಿಸಿದ ಉದಾಹರಣೆಗಳಿವೆ. ಸ್ವಾತಂತ್ರ್ಯ ಚಳವಳಿಯಲ್ಲಿ ದಲಿತರು ಪ್ರಾಣ ತೆತ್ತಿದ್ದಾರೆ. ಆದರೆ, ಇತಿಹಾಸದಲ್ಲಿ ಈ ಬಗ್ಗೆ ಉಲ್ಲೇಖವಿಲ್ಲ. ಇದ್ದಿದ್ದರೂ ಪ್ರಬಲ ವರ್ಗವೊಂದು ಅಳಿಸಿ ಹಾಕಿರಬಹುದು ಎಂದು ಹೇಳಿದರು.
ಸ್ವಾತಂತ್ರ್ಯ ನಂತರದ ಭಾರತದಲ್ಲಿ ಆಳ್ವಿಕೆ ಮಾಡಿದ ಸರ್ಕಾರಗಳು ಶೋಷಿತರನ್ನು ಮತ್ತು ದಲಿತರನ್ನು ಕೇವಲ ಮತದಾನಕ್ಕೆ ಮಾತ್ರ ಬಳಸಿಕೊಂಡಿವೆ. ಈ ವಿರುದ್ಧ ಪ್ರಜ್ಞೆ ಬೆಳೆಸಿಕೊಳ್ಳಲು ಶೋಷಿತರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಹಕ್ಕಿಗಾಗಿ ಹೋರಾಟಕ್ಕೆ ಇಳಿಯಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ ಎಂ. ಜಯಣ್ಣ ಮಾತನಾಡಿ, ನಮ್ಮಲ್ಲಿರುವ ಸಂಪ್ರದಾಯ, ಮೂಢನಂಬಿಕೆ ಹಾಗೂ ಪೈಶಾಚಿಕ ಕೃತ್ಯಗಳನ್ನು ಕೈಬಿಡಬೇಕು. ಅನ್ಯಾಯ ಖಂಡಿಸುವಂತೆ ಆಗಬೇಕು. ಸಮಾಜದಲ್ಲಿರುವ ತಾರತಮ್ಯ ಹೋಗಲಾಡಿಸಬೇಕು ಎಂದು ಹೇಳಿದರು.
ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಶರಣರು, ಕೋಡಿಹಳ್ಳಿ ಆದಿಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ ಮಾತನಾಡಿದರು.