ಬೆಂಗಳೂರು: ಬಹುನಿರೀಕ್ಷಿತ ಹೆಲಿಟೂರಿಸಂ ಆರಂಭಿಸಲು ಮುಂಗಾರು ಮಳೆ ಅಡ್ಡಿಯಾಗಿದ್ದು, ಮಳೆಗಾಲ ಮುಗಿದ ತಕ್ಷಣ ಈ ಸೇವೆ ಆರಂಭವಾಗಲಿದೆ ಎಂದು ಪ್ರವಾಸೋದ್ಯಮ ಸಚಿವ ಜಿ. ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹೆಲಿಟೂರಿಸಂ ಆರಂಭಿಸಲು ಕಳೆದ ವರ್ಷ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಓಯಸಿಸ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
`ಅಕ್ರಮ ಎಸಗಿಲ್ಲ~: `ನಾನು ಅಕ್ರಮ ಗಣಿಗಾರಿಕೆ ನಡೆಸಿಲ್ಲ. ಸುಪ್ರೀಂಕೋರ್ಟ್ ನೇಮಕ ಮಾಡಿರುವ ಕೇಂದ್ರ ಉನ್ನತಾಧಿಕಾರ ಸಮಿತಿಯ ವರದಿ ಬಂದ ನಂತರ ಅಕ್ರಮ ಗಣಿಗಾರಿಕೆ ನಡೆಸಿದವರು ಯಾರೆಂಬುದು ಜನತೆಗೆ ತಿಳಿಯಲಿದೆ~ ಎಂದರು.
`ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗುತ್ತದೆಯೇ? ನಿಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ದೊರಕಲಿದೆಯೆ?~ ಎಂದು ಸುದ್ದಿಗಾರರು ಕೇಳಿದಾಗ, `ಇಲ್ಲಿ ಯಾರೂ ಬೆಂಬಲಿಗರಲ್ಲ. ನಾವೆಲ್ಲರೂ ಬಿಜೆಪಿ ಕಾರ್ಯಕರ್ತರು, ಸಚಿವ ಸಂಪುಟ ವಿಸ್ತರಣೆಯ ಕುರಿತು ಪಕ್ಷದ ನಾಯಕರು ನಿರ್ಧಾರ ಕೈಗೊಳ್ಳುತ್ತಾರೆ~ ಎಂದರು.
ಮನೆ ಅಂಗಳಕ್ಕೆ ಕ್ರೀಡೆ: ರಾಜ್ಯ ಯುವಜನ ಮತ್ತು ಕ್ರೀಡಾ ಇಲಾಖೆ `ಮನೆ ಅಂಗಳಕ್ಕೆ ಕ್ರೀಡೆ~ ಯೋಜನೆಯಡಿ ನೂತನವಾಗಿ ಆರಂಭಿಸಿರುವ `ಸಂಚಾರಿ ಕ್ರೀಡಾ ವಾಹನ~ಕ್ಕೆ ಚಾಲನೆ ನೀಡಿದ ರೆಡ್ಡಿ ಅವರು, ಈ ಯೋಜನೆಯನ್ನು ಸದ್ಯಕ್ಕೆ ಮಂಡ್ಯ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.