ಮರಿಯಮ್ಮನಹಳ್ಳಿ: ಹೋಬಳಿ ವ್ಯಾಪ್ತಿ ಯಲ್ಲಿ ಸರಿಯಾಗಿ ಮಳೆ ಬೀಳದೆ ಒಂದೆಡೆ ಬಿತ್ತಿ ಮೊಳಕೆಯೊಡೆದ ಬೆಳೆ ಗಳು ಬಾಡುತ್ತಿದ್ದರೆ, ಇನ್ನೊಂದೆಡೆ ರೈತರ ಜೀವನಾಡಿ ಎನಿಸಿದ ಕೆರೆಕುಂಟೆ, ಚೆಕ್ಡ್ಯಾಂಗಳು ನೀರಿಲ್ಲದೆ ಭಣ ಗುಟ್ಟುತ್ತಿರುವುದು ನೇಗಿಲಯೋಗಿ ಯನ್ನು ಆತಂಕದಲ್ಲಿ ತಳ್ಳಿದೆ.
ಎರಡು ವರ್ಷ ಬರದಿಂದ ತತ್ತರಿಸಿದ್ದ ರೈತರು ಈ ಬಾರಿ ಉತ್ತಮ ಮಳೆ ಸುರಿಯಬಹುದು ಎನ್ನುವ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದರು. ಬಿತ್ತಿದ ಬೀಜಗಳು ಮೊಳೆಯೊಡೆದು ಇಪ್ಪರಿಂದ ಇಪ್ಪತೈದು ದಿನಗಳು ಕಳೆದಿವೆ. ಮಳೆಯಿಲ್ಲದ ಕಾರಣ ಅವು ಬಾಡತೊಡಗಿವೆ.
ಮಹಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 7937.20 ಹೆಕ್ಟೇರ್ ಬಿತ್ತನೆ ಭೂಮಿ ಇದೆ. ಈಗಾಗಲೇ ಜೋಳ, ಮೆಕ್ಕೆಜೋಳ, ತೊಗರಿ, ಸೂರ್ಯಕಾಂತಿ ಸೇರಿದಂತೆ ಒಟ್ಟು 3035 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.
ಕೆಲವು ರೈತರು ಭೂಮಿ ಯನ್ನು ಹದಗೊಳಿಸಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡು ಮೆಕ್ಕೆಜೋಳ, ಸೂರ್ಯಕಾಂತಿ, ಸಜ್ಜೆ ಬಿತ್ತನೆಗೆ ಕಾಯು ತ್ತಿದ್ದರೆ, ಮೊಳಕೆಯೊಡೆದ ಬೆಳೆಗಳಿಗೆ ಹದವಾದ ಮಳೆಯ ಅಗತ್ಯವಿದೆ.
`ಹೋಬಳಿ ವ್ಯಾಪ್ತಿಯಲ್ಲಿರುವ ಹದಿನೈದು ಸಣ್ಣ, ದೊಡ್ಡ ಕೆರೆಗಳು ಒಣಗಿಹೋಗಿವೆ. ಕೆರೆಕುಂಟೆಗಳಲ್ಲಿ ನೀರು ಇಲ್ಲದಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಈ ಬಾರಿ ಉತ್ತಮ ಮಳೆ ಸುರಿಯಬಹುದು ಎಂದು ನೀರೀಕ್ಷಿಸಿದ್ದ ಅನ್ನದಾತರ ಮುಖದಲ್ಲಿ ಮಂದಹಾಸ ಮಾಯವಾಗುತ್ತಿದೆ.
ಹಾರುವನಹಳ್ಳಿ ಕೆರೆ, ಗುಂಡಾಕೆರೆ, ಚಿಲಕನಹಟ್ಟಿ, ದೇವಲಾಪುರ, ಗರಗ, ಬ್ಯಾಲಕುಂದಿ, ಗೊಲ್ಲರಹಳ್ಳಿ, ಜಿ.ನಾಗ ಲಾಪುರ, ಅಯ್ಯನಹಳ್ಳಿ, ನಂದಿಬಂಡಿ, ತಾಳೇಬಸಾಪುರ, ಪೋತಲಕಟ್ಟೆ, ತಿಮ್ಮಲಾಪುರಕೆರೆ ಸಹ ಖಾಲಿಯಾಗಿವೆ.
ಪ್ರತಿವರ್ಷದಂತೆ ವಾಡಿಕೆಯಷ್ಟು ಮಳೆಯಾಗಿದ್ದರೆ ಬಹುತೇಕ ಕೆರೆಗಳಲ್ಲಿ ತಕ್ಕಮಟ್ಟಿಗೆ ನೀರು ಸಂಗ್ರಹ ವಾಗಿರುತ್ತಿತ್ತು.
ಮಳೆಯಿಲ್ಲದೇ ಬಹು ತೇಕ ಕೆರೆಗಳು ಹನಿ ನೀರು ಕಾಣದೆ ಕೆರೆಪ್ರದೇಶ ಬರಡಾಗಿವೆ. ಜತೆಗೆ ಸುತ್ತಮುತ್ತಲಿನ ಪ್ರದೇಶದ ಕೊಳವೆಬಾವಿ ಅಂತರ್ಜಲಮಟ್ಟ ಸಹ ಕುಸಿದಿದೆ. ಮೂರು ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸುವ ಡಣಾಯಕನ ಕೆರೆ ಸಂಪೂರ್ಣ ಬತ್ತಿಹೋಗಿದೆ. ತುಂಗ ಭದ್ರಾ ಜಲಾಶಯದಿಂದ ಈ ಕೆರೆಗೆ ನೀರು ತುಂಬಿಸುವ ಯೋಜನೆಗೆ ಕಳೆದ ವರ್ಷದ ಕೊನೆಯಲ್ಲಿ ಚಾಲನೆ ನೀಡ ಲಾಗಿದ್ದು, ತುಂಗಭದ್ರಾ ಜಲಾಶಯ ಬೇಗ ತುಂಬಿದರೆ ಕೆರೆಗೆ ಏತನೀರಾವರಿ ಯಿಂದ ಬೇಗ ನೀರು ಹರಿದು ಬರಲಿದೆ.
`ನೋಡಿ ಬರಗಾಲದಿಂದ ತೀವ್ರ ಕಷ್ಟ ಅನುಭವಿಸಿದ್ದೇವೆ, ಮಳೆ ಬೀಳದೆ ಬಹುತೇಕ ಕೆರೆಕುಂಟೆಗಳು ಖಾಲಿ ಯಾಗಿರುವುದು ರೈತರಿಗೆ ಕಷ್ಟವಾಗಿದೆ. ಆರಂಭದಲ್ಲಿ ಮಳೆ ಚೆನ್ನಾಗಿ ಸುರಿದಿತ್ತು. ಅದರ ಭರವಸೆಯ ಮೇಲೆಯೇ ನಾವು ಜೋಳ, ಮೆಕ್ಕೆಜೋಳ ಬಿತ್ತನೆ ಮಾಡಿವಿ. ಬೀಜ ಮೊಳಕೆಯೊಡೆದು ಇಪ್ಪತ್ತು ದಿನ ಆಗೇತಿ, ಈಗ ಬೆಳೆಗೆ ಚಲೋ ಮಳಿ ಬಂದ್ರೆ ಚೆನ್ನಾಗಿ ಫಸಲು ಬೆಳಿಬಹುದು' ಎನ್ನುತ್ತಾರೆ ಡಣಾಯ ಕನಕರೆ ಮಾಗಾಣಿ ರೈತ ದುರುಗಪ್ಪ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.