ಶಿವಮೊಗ್ಗ: ಭ್ರಷ್ಟಾಚಾರದ ವಿರುದ್ಧ ಪ್ರಬಲ ಲೋಕಪಾಲ್ ಮಸೂದೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ಅಂಗೀಕೃತ ಆಗಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.
ಮಸೂದೆ ಅಂಗೀಕಾರ ಕುರಿತಂತೆ ಕಾಂಗ್ರೆಸ್ ದಿನಕ್ಕೊಂದು ಹೇಳಿಕೆ ನೀಡುತ್ತಿದೆ. ಆದ್ದರಿಂದ ಮುಂಬರುವ ಚಳಿಗಾಲದ ಅಧಿವೇಶನದಲ್ಲೇ ಅಂಗೀಕಾರ ಮಾಡಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.
ಹಾಗೆಯೇ, ರಾಜ್ಯದಲ್ಲಿ ಗಣಿ ಹಗರಣಗಳ ಬಗ್ಗೆ ನೀಡಿರುವ ಲೋಕಾಯುಕ್ತ ವರದಿಯನ್ನು ಸರ್ಕಾರ ಅಂಗೀಕರಿಸಬೇಕು ಮತ್ತು ಭ್ರಷ್ಟರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸ್ವಾರ್ಥಕ್ಕಾಗಿ ರಾಜ್ಯದ ಸಂಪತ್ತನ್ನು ದೋಚಿಕೊಂಡ ಕೆಲವರು ಈಗ ಜೈಲಿನ ಹಾದಿ ಹಿಡಿದಿದ್ದಾರೆ.
ಈ ವರದಿ ಜಾರಿಗೊಂಡರೆ ಇನ್ನಷ್ಟು ರಾಜಕಾರಣಿಗಳು, ಅಧಿಕಾರಿಗಳು ಜೈಲಿನ ಕಂಬಿ ಎಣಿಸಬೇಕಾಗುತ್ತದೆ. ಈ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ದೃಷ್ಟಿಯಿಂದ ಆದಷ್ಟು ಬೇಗ ಸರ್ಕಾರ ಈ ವರದಿಯನ್ನು ಅಂಗೀಕರಿಸಬೇಕು ಎಂದು ಆಗ್ರಹಿಸಿದರು.
ಡೀಸೆಲ್, ಪೆಟ್ರೋಲ್, ಗ್ಯಾಸ್, ಸೀಮೆಎಣ್ಣೆ ಬೆಲೆಗಳನ್ನು ಭಾರೀ ಪ್ರಮಾಣದಲ್ಲಿ ಏರಿಸುವ ಮೂಲಕ ಕೇಂದ್ರ ಸರ್ಕಾರವೇ ಎಲ್ಲ ರೀತಿಯ ಬೆಲೆ ಏರಿಕೆಗೆ ಕಾರಣವಾಗಿದೆ. ಹಾಗಾಗಿ, ತಕ್ಷಣವೇ ಅವುಗಳ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ಧರಣಿ ನೇತೃತ್ವವನ್ನು ಪಕ್ಷದ ರಾಜ್ಯ ಮಂಡಳಿ ಸದಸ್ಯರಾದ ಡಿ.ಸಿ. ಮಾಯಣ್ಣ, ಬಿ. ಶಂಕರಪ್ಪ, ಜಿಲ್ಲಾ ಸಹ ಕಾರ್ಯದರ್ಶಿಗಳಾದ ಕೆ. ರಾಜಪ್ಪ, ಎಚ್.ಬಿ. ಲಿಂಗೋಜಿರಾವ್, ಮುಖಂಡ ಪುಟ್ಟಸ್ವಾಮಿ ಮತ್ತಿತರರು ವಹಿಸಿದ್ದರು.