ಮಸ್ಕತ್ (ಐಎಎನ್ಎಸ್, ಪಿಟಿಐ): ಪ್ರಜಾಪ್ರಭುತ್ವ ಪರವಾದ ಪ್ರತಿಭಟನಾಕಾರರು ಸೋಮವಾರ ನಡೆಸಿದ ಗಲಭೆಯನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನಿಸಿದಾಗ ಆರು ಮಂದಿ ಗುಂಡೇಟಿಗೆ ಬಲಿಯಾಗಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಸುಮಾರು ಎರಡು ಸಾವಿರ ಮಂದಿ ಪ್ರತಿಭಟನೆ ನಡೆಸುತ್ತಿದ್ದಾಗ ಅವರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಇಲ್ಲಿನ ಮುಖ್ಯ ಮಾರುಕಟ್ಟೆ ಪ್ರದೇಶವಾದ ಸೊಹಾರ್ನ ಹಲವು ಕಡೆ ಸೋಮವಾರ ಬೆಂಕಿ ಹೊತ್ತಿಕೊಂಡಿದ್ದು, ದಿನವಿಡೀ ಉರಿಯುತಿತ್ತೆಂದೂ ವರದಿಯಾಗಿದೆ.
ಮುಬಾರಕ್ ಆಸ್ತಿ ಮುಟ್ಟುಗೋಲು: (ಕೈರೊ ವರದಿ): ಈಜಿಪ್ಟ್ನ ಮಾಜಿ ಸರ್ವಾಧಿಕಾರಿ ಹೊಸ್ನಿ ಮುಬಾರಕ್ ಮತ್ತು ಅವರ ಕುಟುಂಬ ವರ್ಗದವರಿಗೆ ಸೇರಿರುವ ದೇಶದೊಳಗಿನ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಈಜಿಪ್ಟ್ನ ಈಗಿನ ಆಡಳಿತಗಾರರು ಆಲೋಚಿಸುತ್ತಿದ್ದಾರೆ.
ಹೀಗಾಗಿ, ಮುಬಾರಕ್ ಮತ್ತು ಅವರ ಕುಟುಂಬ ವರ್ಗದವರು ದೇಶ ಬಿಟ್ಟು ತೆರಳದಂತೆ ಆದೇಶ ನೀಡಲಾಗಿದೆ ಎಂದೂ ಸರ್ಕಾರ ತಿಳಿಸಿದೆ.
ಬಹರೇನ್ನಲ್ಲಿ ಅಶಾಂತಿ (ಮನಾಮ ವರದಿ): ಕೊಲ್ಲಿ ರಾಷ್ಟ್ರಗಳಲ್ಲಿ ಪ್ರಜಾಸತ್ತೆಗಾಗಿ ವಿವಿಧ ಕಡೆ ನಡೆಯುತ್ತಿರುವ ಪ್ರತಿಭಟನೆ ಮತ್ತು ಸಂಘರ್ಷಗಳು ಬಹರೇನ್ನಲ್ಲಿ ಸೋಮವಾರ ಹೊಸ ಸ್ವರೂಪ ಪಡೆದು ಕೊಂಡಿತು. ಮನಾಮದಲ್ಲಿರುವ ಸಂಸತ್ ಭವನದ ಸುತ್ತಲೂ ಕಿಕ್ಕಿರಿದು ಸೇರಿದ ಸಹಸ್ರಾರು ಮಂದಿ ಪ್ರತಿಭಟನಾಕಾರರು ಆಡಳಿತಗಾರರಲ್ಲಿ ಆತಂಕ ಮೂಡಿಸಿದ್ದಾರೆ.
ಅಮೆರಿಕಾದ ಶಸ್ತ್ರಾಸ್ತ್ರಗಳಿಂದಲೇ ಗುಂಡು: (ಟೆಹರಾನ್ ವರದಿ): ಕೊಲ್ಲಿ ರಾಷ್ಟ್ರಗಳಲ್ಲಿ ಭುಗಿಲೆದ್ದಿರುವ ಗಲಭೆ, ಹಿಂಸಾಚಾರಗಳಿಗೆ ಅಮೆರಿಕ ಸರ್ಕಾರವೇ ಕಾರಣ ಎಂದು ಇರಾನ್ ಸರ್ಕಾರ ಸೋಮವಾರ ಆರೋಪಿಸಿದೆ