ಮಸ್ಕಿ: ಎರಡನೇ ಶ್ರೀಶೈಲವೆಂದು ಪ್ರಸಿದ್ಧಿ ಪಡೆದ ಇಲ್ಲಿನ ಶ್ರೀ ಮಲ್ಲಿಕಾರ್ಜುನ ದೇವರ ಮಹಾರಥೋತ್ಸವ ಗಚ್ಚಿನ ಹಿರೇಮಠದ ರುದ್ರಸ್ವಾಮಿಜಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ 4-30 ಕ್ಕೆ ಅದ್ದೂರಿಯಾಗಿ ಜರುಗಿತು. ಬೆಳಿಗ್ಗೆ ಮಲ್ಲಿಕಾರ್ಜುನ ದೇವರಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆಯನ್ನು ಧಾರ್ಮಿಕ ವಿಧಿ ವಿಧಾನದಂತೆ ನಡೆಯಿತು. ಪ್ರತಿ ವರ್ಷದಂತೆ ಎಲಿಗಾರ ಕುಟುಂಬದ ಭಕ್ತರು ನೀಡುವ ರಥಕ್ಕೆ ಎಣ್ಣೆ ಉಣಿಸುವ ಕಾರ್ಯಕ್ರಮ ನಡೆಯಿತು. ನಂತರ ಪಟ ಕಟ್ಟಲಾಯಿತು, ಭಕ್ತರು ಭಕ್ತಿಯಿಂದ ಬಾಳೆಗೊನೆ, ಜೋಳದ ತೆನೆ, ದೊಡ್ಡ ದೊಡ್ಡ ಹಾರ ತುರಾಯಿಗಳಿಂದ ರಥವನ್ನು ಶೃಂಗಾರಗೊಳಿಸಲಾಯಿತು.
ಸಂಜೆ 4-30 ಕ್ಕೆ ಮುಖ್ಯ ಬೀದಿಯಲ್ಲಿರುವ ದೈವದ ಕಟ್ಟೆಯವರೆಗೆ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು. ಫೆ.14 ರಿಂದ ಆರಂಭವಾದ ಪೂಜಾ ವಿಧಿ ವಿಧಾನಗಳು ಗುರುವಾರದವರೆಗೆ ಸರಳವಾಗಿ ನಡೆದುಕೊಂಡು ಬಂದಿವೆ. ಫೆ.18 ಶುಕ್ರವಾರ ಭಾರತ ಹುಣ್ಣಿಮೆಯಂದು ನಡೆದ ರಥೋತ್ಸವಕ್ಕೆ ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರಗಳಿಂದ ಸುಮಾರು 6 ಸಾವಿರ ಭಕ್ತರು ಆಗಮಿಸಿದ್ದರು. ಶಾಸಕ ಪ್ರತಾಪಗೌಡ ಪಾಟೀಲ, ಎಚ್,ಕೆ.ಡಿ.ಬಿ ಅಧ್ಯಕ್ಷ ಅಮರನಾಥ ಪಾಟೀಲ ಗುಲ್ಬರ್ಗ ಹಾಗೂ ಗ್ರಾಮದ ಮುಖಂಡರಾದ ಕೆ.ವೀರನಗೌಡ, ಜಿ.ಪಂ.ಸದಸ್ಯ ಮಹಾದೇವಪ್ಪ ಗೌಡ, ಎಚ್.ಬಿ.ಮುರಾರಿ, ಮಾಜಿ ಜಿ.ಪಂ.ಸದಸ್ಯ ಶ್ರೀಶೈಲಪ್ಪ ಬ್ಯಾಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಂದಾನಪ್ಪ ಗುಂಡಳ್ಳಿ, ಮಲಪ್ಪ ಕುಡತನಿ, ಎಂ.ಬಸವರಾಜ ಪಾಲ್ಗೊಂಡಿದ್ದರು. ಮಸ್ಕಿ ವೃತ್ತದ ಸಿಪಿಐ ಪ್ರಭುಗೌಡ, ಠಾಣೆಯ ಪಿಎಸ್ಐ ಉದಯರವಿ, ಲಿಂಗಸುಗೂರು ಪಿಎಸ್ಐ ಬೂಸರಡ್ಡಿ ಯಾವುದೆ ಅನಾಹುತ ಜರುಗದಂತೆ ಬಿಗಿ ಭದ್ರತೆ ಕೈಕೊಂಡಿದ್ದರು. ಫೆ.20 ರಂದು ಭಾನುವಾರ ಕಡುಬಿನ ಕಾಳಗ ಉಚ್ಛಾಯ ನಡೆಯುವುದು. ಒಂದು ವಾರ ಜಾತ್ರೆ ನಡೆಯುತ್ತದೆ.