ಬಾಗಲಕೋಟೆ: ಕ್ರಿಕೆಟ್ನಿಂದಾಗಿ ಇಂದು ದೇಶೀಯ ಕ್ರೀಡೆಗಳು ಮಹತ್ವ ಕಳೆದುಕೊಳ್ಳುತ್ತಿವೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಮತ್ತು ಶಾಸಕ ವೀರಣ್ಣ ಚರಂತಿಮಠ ಕಳವಳ ವ್ಯಕ್ತಪಡಿಸಿದರು.
`ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್~ ಪತ್ರಿಕೆಗಳ ಪ್ರಾಯೋಜಕತ್ವದಲ್ಲಿ ಬೆಂಗಳೂರಿನ ಡೆಕ್ಕನ್ ಅಥ್ಲೆಟಿಕ್ ಕ್ಲಬ್ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕೆ.ಎ.ನೆಟ್ಟಕಲ್ಲಪ್ಪ ಸ್ಮಾರಕ ರಾಜ್ಯ ರಸ್ತೆ ಓಟ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯಕ್ಕೆ ಕೊಡುವ ಮಹತ್ವವನ್ನೇ ಪಠ್ಯೇತರ ಚಟುವಟಿಕೆಗೂ ನೀಡಬೇಕು, ಕ್ರೀಡೆ ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಪೂರಕವಾಗಿದೆ ಎಂದು ಹೇಳಿದರು.
`ಪ್ರಜಾವಾಣಿ~ ಮತ್ತು `ಡೆಕ್ಕನ್ಹೆರಾಲ್ಡ್~ ಪತ್ರಿಕೆಗಳು ಸುದ್ದಿಗೆ ಮಾತ್ರ ಸೀಮಿತವಾಗದೇ ಕ್ರೀಡಾಕೂಟವನ್ನು ಆಯೋಜಿಸುವ ಮೂಲಕ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉತ್ತಮ ವೇದಿಕೆ: ಮಹಿಳಾ ವಿಭಾಗ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಜಿಲ್ಲಾ ಧಿಕಾರಿ ಎ.ಎಂ.ಕುಂಜಪ್ಪ, ಡೆಕ್ಕನ್ ಅಥ್ಲೆಟಿಕ್ ಕ್ಲಬ್ ರಾಜ್ಯದ ಉದಯೋನ್ಮಖ ಕ್ರೀಡಾಪಟುಗಳಿಗೆ ಹಲವು ವರ್ಷಗಳಿಂದ ಉತ್ತಮ ವೇದಿಕೆ ಒದಗಿಸುತ್ತಾ ಬಂದಿದೆ ಎಂದು ಶ್ಲಾಘಿಸಿದರು.
ಅಶ್ವಿನಿ ನಾಚಪ್ಪ, ಉದಯ ಪ್ರಭು ಮತ್ತಿತರ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಪಟುಗಳನ್ನು ಪ್ರಥಮವಾಗಿ ಗುರುತಿಸಿದ ಸಂಸ್ಥೆ ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಎಂದು ಸ್ಮರಿಸಿದರು. ಇತ್ತೀಚಿನ ದಿನಗಳಲ್ಲಿ ಮಕ್ಕಳು ಕ್ರೀಡಾಂಗಣದಿಂದ ದೂರ ಉಳಿದು ವಿಡಿಯೋ ಮತ್ತು ಕಂಪ್ಯೂಟರ್ ಗೇಮ್ಆಡುವ ಮೂಲಕ ತೃಪ್ತಿಪಡುತ್ತಿರುವುದು ವಿಷಾದನೀಯ ಎಂದು ಹೇಳಿದರು.
`ಪ್ರಜಾವಾಣಿ~ಗೆ ಅಭಿನಂದನೆ: ಬಾಲಕರ ವಿಭಾಗದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ, ತರಬೇತಿ ನಿರತ 117 ಪೊಲೀಸ್ ಸಿಬ್ಬಂದಿಗೆ ರಾಜ್ಯಮಟ್ಟದ ರಸ್ತೆ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ `ಪ್ರಜಾವಾಣಿ~ಗೆ ಇಲಾಖೆಯಿಂದ ಅಭಿನಂದನೆ ಸಲ್ಲಿಸಿದರು.
ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ನಿಗದಿತ ಗುರಿಯನ್ನು ಪೂರ್ಣಗೊಳಿಸಿದ ತಮ್ಮ ಸಿಬ್ಬಂದಿಗೆ ಇಲಾಖೆಯಿಂದ ಪ್ರಮಾಣಪತ್ರ ನೀಡುವುದಾಗಿ ಹೇಳಿದರು. ಪೊಲೀಸರಿಗೆ ಮುಖ್ಯವಾಗಿ ದೃಢತೆ ಮತ್ತು ಧೀರತ್ವ ಅಗತ್ಯ, ಇಂತಹ ಸದೃಢ ಮನಸ್ಸುಗಳನ್ನು ನಿರ್ಮಿಸಲು ಕ್ರೀಡೆ ಪೂರಕ ಎಂದರು.
ಪ್ರತಿಯೊಬ್ಬರು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು, ಸೋಲು-ಗೆಲುವು ಮುಖ್ಯವಲ್ಲ, ಕ್ರೀಡೆಯಲ್ಲಿ ಭಾಗವಹಿಸಿ ಸೋತರೂ ಸಹ ಉತ್ತಮ ಆರೋಗ್ಯ ಲಭಿಸುತ್ತದೆ ಎಂದರು.
ಅನಾರೋಗ್ಯಕರವಾದ ದೇಹ ಪರಿಸ್ಥಿತಿಯನ್ನು ಎದುರಿಸಲಾಗದೇ ರಾಜಿ ಮಾಡಿಕೊಳ್ಳುತ್ತದೆ, ಆದರೆ ಆರೋಗ್ಯಕರವಾದ ದೇಹ ಎಂದಿಗೂ ಪರಿಸ್ಥಿತಿಯೊಂದಿಗೆ ರಾಜಿಮಾಡಿಕೊಳ್ಳಲು ಇಷ್ಟಪಡು ವುದಿಲ್ಲ, ಆರೋಗ್ಯಕರ ದೇಹಕ್ಕಾಗಿ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದರು.
ಬಾಲಕಿಯರಿಗೆ ಪ್ರಶಸ್ತಿ: ರಸ್ತೆ ಓಟದ ಬಾಲಕಿಯರ ವಿಭಾಗದಲ್ಲಿ ವಿಜೇತರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಗುಂಡಪ್ಪ, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಕೆ.ನಂದನೂರ ಹಾಗೂ ಬಾಗಲಕೋಟೆ ಜಿಲ್ಲಾ ಅಥ್ಲೀಟಿಕ್ ಕಾರ್ಯದರ್ಶಿ ಯಲಗಣ್ಣನವರ ಬಹುಮಾನ ವಿತರಿಸಿದರು.
ಸಹಕಾರಕ್ಕೆ ಕೃತಜ್ಞತೆ: ರಾಜ್ಯ ರಸ್ತೆ ಓಟ ಸ್ಪರ್ಧೆಯನ್ನು ಯಶಸ್ವಿಗೊಳಿಸುವಲ್ಲಿ ಡೆಕ್ಕನ್ ಅಥ್ಲೆಟಿಕ್ ಕ್ಲಬ್ಗೆ ಸಹಕಾರ ನೀಡಿದ ಬಸವೇಶ್ವರ ವಿದ್ಯಾವರ್ಧಕ ಸಂಘ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಸಾರ್ವಜನಿಕ ಶಿಕ್ಷಣ ಇಲಾಖೆ, ಯುವಜನ ಮತ್ತು ಕ್ರೀಡಾ ಇಲಾಖೆ, ಆರೋಗ್ಯ ಇಲಾಖೆ, ಪತ್ರಿಕಾ ಮತ್ತು ದೃಶ್ಯ ಮಾಧ್ಯಮ ಹಾಗೂ ಜಿಲ್ಲಾ ಅಥ್ಲೀಟಿಕ್ ಸಂಸ್ಥೆಗಳಿಗೆ ಡೆಕ್ಕನ್ ಅಥ್ಲೆಟಿಕ್ ಕ್ಲಬ್ನ ಸಂಘಟನಾ ಕಾರ್ಯದರ್ಶಿ ಅನಂತರಾಜು ಕೃತಜ್ಞತೆ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.