ರಾಯಚೂರು: ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಅಂಗವಾಗಿ ಮಂಗಳವಾರ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಭವ್ಯ ಮೆರವಣಿಗೆಯು ನಗರದಲ್ಲಿ ನಡೆಯಿತು.
ನಗರದ ಮಹಿಳಾ ಸಮಾಜ ಆವರಣದಿಂದ ಆರಂಭಗೊಂಡ ಭಾವಚಿತ್ರ ಮೆರವಣಿಗೆಯು ನಗರಸಭೆ, ಬಸ್ ನಿಲ್ದಾಣದ ಎದುರಿನ ರಸ್ತೆ, ಡಾ.ಅಂಬೇಡ್ಕರ್ ವೃತ್ತ, ರೈಲ್ವೆ ಸ್ಟೇಶನ್ ರಸ್ತೆಯಲ್ಲಿ ಸಾಗಿತು. ನಂತರ ರಂಗಮಂದಿರಕ್ಕೆ ಬಂದು ಸೇರಿತು.
ಮಹಿಳಾ ಸಮಾಜದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಯನ್ನು ಜನಪ್ರತಿನಿಧಿಗಳು ಉದ್ಘಾಟಿಸಿದರು. ಕರಡಿ ಮಜಲು, ಡೊಳ್ಳು ಕುಣಿತ, ಲೇಜಿಮ್, ಜಾಂಜ್ ಮೇಳ ಸೇರಿದಂತೆ ಹಲವಾರು ಕಲಾ ತಂಡದ ಪ್ರತಿನಿಧಿಗಳು ಮರವಣಿಗೆಯುದ್ದಕ್ಕೂ ಆಕರ್ಷಕ ಪ್ರದರ್ಶನ ನೀಡಿದರು.
ಜಿಲ್ಲೆಯ ಐದು ತಾಲ್ಲೂಕುಗಳಿಂದ ಆಗಮಿಸಿದ್ದ ವಾಲ್ಮೀಕಿ ಸಮಾಜದ ಬಾಂಧವರು, ಸಾರ್ವಜನಿಕರು ಮೆರವಣಿಗೆಯಲ್ಲಿ ಕೋಲಾಟ, ಕಲಾ ತಂಡಗಳೊಂದಿಗೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು.