ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಕಾವ್ಯದಿಂದ ಭಾಷೆಗೆ ಮಹತ್ವ

Last Updated 16 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಭಾಷೆಯೊಂದರಲ್ಲಿ ಮಹಾಕಾವ್ಯ ರಚನೆಯಾದರೆ ಆ ಭಾಷೆಗೆ ಸಹಜವಾಗಿ ಮಹತ್ವ ಲಭಿಸುತ್ತದೆ. ಕೊಡವ ಭಾಷೆಯೂ ಈ ಹಿನ್ನೆಲೆಯಲ್ಲಿ ವಿಶಿಷ್ಟತೆ ಪಡೆಯುತ್ತದೆ~ ಎಂದು ಹಿರಿಯ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಅಭಿಪ್ರಾಯಪಟ್ಟರು.

ಮಂಡೀರ ಜಯಾ ಅಪ್ಪಣ್ಣ ಅವರು ಕೊಡವ ಭಾಷೆಯಲ್ಲಿ ರಚಿಸಿದ ಮಹಾಭಾರತ ಕಥಾನಕವನ್ನೊಳಗೊಂಡ `ಜಯಾ ಭಾರತ~ ಮಹಾಕಾವ್ಯವನ್ನು ನಗರದಲ್ಲಿ ಗುರುವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ~ಕವಯತ್ರಿಯು ಮೂಲ ಮಹಾಭಾರತದಲ್ಲಿ ಹಲವು ವ್ಯತ್ಯಾಸಗಳನ್ನು ಗುರುತಿಸಿದ್ದಾರೆ~ ಎಂದು ಹೇಳಿದರು.

ಹಿರಿಯ ಇತಿಹಾಸ ತಜ್ಞ ಡಾ.ಸೂರ್ಯನಾಥ ಕಾಮತ್, `ಕೊಡವ ಭಾಷೆಯಲ್ಲಿ ರಚನೆಯಾದ ಪುಸ್ತಕಗಳನ್ನು ಅನ್ಯಭಾಷಿಕ ಓದುಗರಿಗೆ ತಿಳಿಸುವ ಉದ್ದೇಶದಿಂದ ಕೊಡವ ಸಮಾಜದವರು ಎಲ್ಲ ಕೃತಿಗಳನ್ನು ಲಭ್ಯವಾಗುವಂತೆ ವ್ಯವಸ್ಥೆಗೊಳಿಸಬೇಕು~ ಎಂದು ಸಲಹೆ ನೀಡಿದರು.

`ಮಹಾಭಾರತದ ಹಲವು ಸನ್ನಿವೇಶಗಳು ಕೊಡಗಿನ ಪರಿಸರದಲ್ಲಿ ಕಾಣಿಸಿಕೊಂಡಿವೆ. ಹುತ್ತರಿ ಹಬ್ಬ, ಅಗಸ್ತ್ಯ ಮುನಿ ಕಾವೇರಿಯನ್ನು ಮೋಹಿಸಿದ ಕುರಿತು ಕಾವ್ಯದಲ್ಲಿ ಉಲ್ಲೇಖವಿದೆ. ಸತ್ಯಸಂಧತೆ, ಧರ್ಮಪಾರಾಯಣ ಮತ್ತಿತರ ಮೌಲ್ಯಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ~ ಎಂದು ಹೇಳಿದರು.

ಮಾಜಿ ಸಚಿವೆ ರಾಣಿ ಸತೀಶ್, `ಮಹಿಳೆಯರು ರಚಿಸುವ ಸಾಹಿತ್ಯವನ್ನು ಅಡುಗೆಮನೆ ಸಾಹಿತ್ಯ ಎಂಬ ಟೀಕೆಗಳೂ ಇವೆ. ಆದರೆ ಕುಟುಂಬದ ಜವಾಬ್ದಾರಿಯ ಮಧ್ಯೆಯೇ ಮಹಿಳೆಯು ಬರವಣಿಗೆಯಲ್ಲಿ ತೊಡಗುತ್ತಾಳೆ. ಈ ಹಿನ್ನೆಲೆಯಲ್ಲಿ ಜಯಾ ಅವರ ಮಹಾಕಾವ್ಯ ಸಾಹಿತ್ಯಿಕ ಹಾಗೂ ಸಾಮಾಜಿಕ ದೃಷ್ಟಿಯಿಂದ ಮಹತ್ವ ಪಡೆದಿದೆ~ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ವೀರಣ್ಣ, `ಕರ್ನಾಟಕದ ಭಾಷೆ ಮತ್ತು ಸಂಸ್ಕೃತಿಯ ಇತಿಹಾಸದಲ್ಲಿ ಇದೊಂದು ಸುದಿನ. ಕೊಡವ ಭಾಷೆಯ ಈ ಮಹಾಕಾವ್ಯ ಒಟ್ಟು ನಾಡಿನ ಭಾಷಾ ಸಂಪತ್ತಿಗೆ ಉತ್ತಮ ಕೊಡುಗೆಯಾಗಿದೆ. ಜೊತೆಗೆ ಸಶಕ್ತವಾಗಿರುವ ಕೊಡವ ಭಾಷೆಗೆ ಸಂವಿಧಾನದಲ್ಲಿ ಮಾನ್ಯತೆ ಕೊಡಬೇಕು~ ಎಂದು ಆಶಿಸಿದರು.

ವಿಷ್ಣುಭಟ್ಟ ಅವರು ಮಹಾಕಾವ್ಯವನ್ನು ಪರಿಚಯಿಸಿದರು. ದೂರದರ್ಶನ ವಾಹಿನಿಯ ಹಿರಿಯ ಉಪ ಮಹಾನಿರ್ದೇಶಕ ಮಹೇಶ್ ಜೋಶಿ, ರೈಲ್ವೆ ವಿಭಾಗದ ಎಡಿಜಿಪಿ ಶಂಕರ ಬಿದರಿ, ಕವಯತ್ರಿ ಜಯಾ ಅಪ್ಪಣ್ಣ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT