ಬೆಂಗಳೂರು: ನ್ಯಾಯಮೂರ್ತಿ ಜೆ.ಎಂ.ಪಾಂಚಾಲ್ ನೇತೃತ್ವದ ಮಹಾದಾಯಿ ನ್ಯಾಯಮಂಡಳಿಯು ಬುಧವಾರದಿಂದ (ಡಿ.18ರಿಂದ 23ರವರೆಗೆ) ಆರು ದಿನಗಳ ಕಾಲ ರಾಜ್ಯದ ಮಹಾದಾಯಿ ಕಣಿವೆ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿ, ಮಾಹಿತಿ ಸಂಗ್ರಹಿಸಲಿದೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.
ಸೋಮವಾರ ವಿಧಾನಸೌಧದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ನ್ಯಾ.ಪಾಂಚಾಲ್, ನ್ಯಾ.ವಿನಯ್ ಮಿತ್ತಲ್, ನ್ಯಾ.ಪಿ.ಎಸ್.ನಾರಾಯಣ, ಕರ್ನಾಟಕ ಮತ್ತು ಗೋವಾ ರಾಜ್ಯಗಳ ತಾಂತ್ರಿಕ ಸಮಿತಿಯ ಸದಸ್ಯರು ಹಾಗೂ ಉಭಯ ರಾಜ್ಯಗಳ ವಕೀಲರು ಈಗಾಗಲೇ ಗೋವಾದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಬುಧವಾರ ಅಂತಾರಾ ಅಣೆಕಟ್ಟೆಯಿಂದ ರಾಜ್ಯದಲ್ಲಿ ಪ್ರವಾಸ ಆರಂಭಿಸಲಿದ್ದಾರೆ’ ಎಂದರು. ಶನಿವಾರದವರೆಗೂ ಈ ತಂಡ ಕಳಸಾ, ಬಂಡೂರ, ಸೂಪಾ, ಮಲಪ್ರಭಾ ಅಣೆಕಟ್ಟೆ ಮತ್ತಿತರ ಕಡೆಗಳಲ್ಲಿ ಪರಿಶೀಲನೆ ನಡೆಸಲಿದೆ ಎಂದರು.