ಬೆಂಗಳೂರು, (ಐಎಎನ್ಎಸ್): ಕೇಂದ್ರದ ನಗರಾಭಿವೃದ್ಧಿ ಸಚಿವ ಕಮಲ್ ನಾಥ್ ಅವರು ಗುರುವಾರ ಇಲ್ಲಿನ ಮಹಾತ್ಮ ಗಾಂಧಿ ರಸ್ತೆಯಲ್ಲಿನ ಮೆಟ್ರೊ ನಿಲ್ದಾಣದಲ್ಲಿ ಮೊದಲ ಹಂತದ 6.7 ಕಿ.ಮೀ. ಉದ್ದದ ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆವರೆಗಿನ ರೀಚ್- 1ರ ಮಾರ್ಗದಲ್ಲಿ ನಮ್ಮ ಮೆಟ್ರೊ ರೈಲಿಗೆ ಚಾಲನೆ ನೀಡುವುದರೊಂದಿಗೆ ಬೆಂಗಳೂರಿನ ನಾಗರಿಕರ `ಮೆಟ್ರೊ ರೈಲು`ಎಂಬ 30 ವರ್ಷಗಳ ಹಿಂದಿನ ಮಹಾ ಕನಸು ನನಸಾದಂತಾಯಿತು.
ರಾಜಧಾನಿಯ ನಾಲ್ಕು ದಿಕ್ಕುಗಳಿಗೂ ತ್ವರಿತ, ಸುರಕ್ಷಿತ ಮತ್ತು ಸುಖದಾಯಕ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸಾಕಾರಗೊಳ್ಳಬೇಕೆಂಬ ಮಹಾತ್ವಾಕಾಂಕ್ಷೆಯ ನಮ್ಮ ಮೆಟ್ರೊ ಯೋಜನೆಯ ಒಂದು ಭಾಗ ಗುರುವಾರ ಲೋಕಾರ್ಪಣೆಗೊಂಡಿದ್ದು, ಸಂಜೆ ನಾಲ್ಕು ಗಂಟೆಯ ನಂತರ ಈ ಮಾರ್ಗದಲ್ಲಿ ಸಾರ್ವಜನಿಕರು ಪ್ರಯಾಣಿಸಬಹುದಾಗಿದೆ.
ಈ ಪ್ರಥಮ ಹಂತದಲ್ಲಿನ ~ನಮ್ಮ ಮೆಟ್ರೊ~ ರೈಲು ಗಾಡಿಗಳು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಓಡಾಡುತ್ತವೆ. ಈ ಮಾರ್ಗದಲ್ಲಿ ಒಟ್ಟು ಆರು ನಿಲ್ದಾಣಗಳಿವೆ. ಪ್ರಯಾಣದ ಅವಧಿ 14 ನಿಮಿಷಗಳು.
ಇಂದಿನ ಸಮಾರಂಭದಲ್ಲಿ ಮುಖ್ಯ ಮಂತ್ರಿ ಡಿ. ವಿ .ಸದಾನಂದಗೌಡ, ಅವರ ಸಂಪುಟದ ಸದಸ್ಯರು, ಬಿಜೆಪಿ ಹಿರಿಯ ನಾಯಕ ಅರುಣ್ ಜೈಟ್ಲಿ ಹಾಗೂ ಕಾಂಗ್ರೆಸ್ ನ ಹಲವಾರು ಹಿರಿಯ ಮುಖಂಡರು ಭಾಗವಹಿಸಿದ್ದರು.
ನಂತರ ಸಮಾರಂಭದಲ್ಲಿನ ಈ ಗಣ್ಯರು ಮತ್ತು ಅಧಿಕಾರಿಗಳ ತಂಡ ಹಾಗೂ ಮಾಧ್ಯಮಗಳ ಪ್ರತಿನಿಧಿಗಳು ನಮ್ಮ ಮೆಟ್ರೊದಲ್ಲಿ ತಮ್ಮ ಮೊದಲ ಪ್ರಯಾಣದ ಸಂಭ್ರಮ ಅನುಭವಿಸಿದರು.
ಕಳೆದ 2002ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಬೆಂಗಳೂರಿನ ಈ ~ನಮ್ಮ ಮೆಟ್ರೊ~ ಕಾಮಗಾರಿಗೆ ಚಾಲನೆ ನೀಡಿದ್ದರು.