ಸವದತ್ತಿ: ಉತ್ತರ ಕರ್ನಾಟಕದ ಶಕ್ತಿದೇವಿ ರೇಣುಕಾ ಮಾತೆಯ ವೀರ ಪುತ್ರ ಪರುಶುರಾಮ ಐಕ್ಯಗೊಂಡ ಸ್ಥಳ ಎನ್ನಲಾದ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಜೋಪಳಾನ್ದ ಲೂಟೆಪರುಶರಾಮನ ಕ್ಷೇತ್ರದಿಂದ ಸುಮಾರು 300 ಕ್ಕೂ ಹೆಚ್ಚು ಜನರು 550 ಕಿ.ಮೀ. ಕಾಲ್ನಡಿಗೆ ಮೂಲಕ ಯಲ್ಲಮ್ಮನ ಗುಡ್ಡಕ್ಕೆ ಆಗಮಿಸಿದರು.
ಮಹಾರಾಷ್ಟ್ರದ ಜೋಪಾಳನ ಪುಣ್ಯ ಕ್ಷೇತ್ರದಲ್ಲಿ ಪರಶುರಾಮನ ದೊಡ್ಡದಾದ ಮಂದಿರ ಇದ್ದು, ಪ್ರತಿ ಮಹಾಶಿವರಾತ್ರಿಯ ದಿನ ಬ್ರಹತ್ ಜಾತ್ರೆ ನಡೆಯುವುದು ಎಂದು ಕಾಲ್ನಡಿಗೆ ಮೂಲಕ ಆಗಮಿಸಿದ ಮುಖಂಡ ಅನೀಲ ಬಾವ್ ಜಾಧವ್ `ಪ್ರಜಾವಾಣಿ~ಗೆ ತಿಳಿಸಿದರು.
ಅನೀಲರಾವ್ ಅವರು ಗುತ್ತಿಗಾರನಾಗಿದ್ದು, ಕಳೆದ 25 ವರ್ಷಗಳಿಂದ ಬರುವ ಭಕ್ತರಿಗೆ ಮಾರ್ಗದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ.
ಊಟ, ವಸತಿಯ ವ್ಯವಸ್ಥೆ ಕಲ್ಪಿಸಲು ಸ್ವಂತದ ಎರಡು ಟ್ರಕ್ ಗಳಲ್ಲಿ ಅಡುಗೆ ಸಾಮಾನುಗಳನ್ನು ಹಾಗೂ ಭಕ್ತರ ವಸ್ತುಗಳನ್ನು ಇಡಲು ವ್ಯವಸ್ಥೆ ಮಾಡಿದ್ದಾರೆ.
ಇಲ್ಲಿ ತಗಲುವ ಎಲ್ಲ ವೆಚ್ಚವನ್ನು ಜಾಧವ ಅವರೇ ಭರಿಸುತ್ತಿದ್ದಾರೆ. ಕಾಲ್ನಡಿಗೆ ಮೂಲಕ ಬರುವ ಭಕ್ತರ ಹಿಂದೆ ಒಂದು ವಾಹನದಲ್ಲಿ ಪರಶುರಾಮನ ಭಾವಚಿತ್ರ ಇರಿಸಿದ್ದು, ಆ ವಾಹನ ಗುಡ್ಡಕ್ಕೆ ಬರುವಾಗ ಮಾತ್ರ ಉಪಯೋಗಿಸಲಾಗುವುದು. ಉಳಿದ ದಿನಗಳಲ್ಲಿ ಯಾರೂ ವಾಹನವನ್ನು ಏರುವಂತಿಲ್ಲ ಎನ್ನುತ್ತಾರೆ ನೀಲ ಬಾವ್ಜಾಧವ.
ದೇವಿಯ ಮಗನ ಕ್ಷೇತ್ರದಿಂದ ತಾಯಿಯ ದರ್ಶನಕ್ಕಾಗಿ ಬಂದಿದ್ದೇವೆ ಎಂದು ದೇವಿಯ ಭಕ್ತ ವಸಂತ ಮಾನೆ ತಿಳಿಸಿದರು.