ಮಂಡ್ಯ: ಮಹಾಲಯ ಅಮಾವಾಸ್ಯೆ ಹಬ್ಬದ ಹಿನ್ನೆಲೆಯಲ್ಲಿ ಭಾನುವಾರ ಮಂಡ್ಯದ ಮಾರುಕಟ್ಟೆಯಲ್ಲಿ ಹಣ್ಣು, ಹೂವು ತರಕಾರಿ ಸೇರಿದಂತೆ ಪೂಜಾ ಸಾಮಾಗ್ರಿಗಳ ಖರೀದಿ ಭರಾಟೆಯಿಂದ ನಡೆದಿತ್ತು.
ಬೆಲೆ ಏರಿಕೆ ಬಿಸಿಯ ನಡುವೆಯೂ, ನಗರಸಭೆ ಎದುರಿನ ಫುಟ್ಪಾತ್, ಮಾರುಕಟ್ಟೆ ಮತ್ತು ಪೇಟೆ ಬೀದಿ ಸೇರಿದಂತೆ ಹಲವೆಡೆ ವ್ಯಾಪಾರ-ವಹಿವಾಟು ಜೋರಾಗಿ ನಡೆದಿತ್ತು. ವಿವಿಧೆಡೆಯಿಂದ ಬಂದಿದ್ದ ಗ್ರಾಮಸ್ಥರು, ಖರೀದಿಯಲ್ಲಿ ತೊಡಗಿದ್ದು ಕಂಡುಬಂತು.
ಹೂವು ಮಾರೊಂದಕ್ಕೆ 30 ರೂ. ಇದ್ದರೆ, ಬಾಳೆಹಣ್ಣು ಕೆ.ಜಿಗೆ 40 ರೂ., ಸೇಬು 80 ರೂ. ಇತ್ತು. ಅಲ್ಲದೆ, ಸಿಹಿ ತಿನಿಸು ಕೊಳ್ಳಲು ಬೇಕರಿ ಬಳಿ ಜನರ ದಟ್ಟಣೆ ಕಂಡುಬಂತು.
ಈ ಹಬ್ಬದ ದಿನವೇ ಬಹುತೇಕರು ಬಾಡೂಟ ಮಾಡಿ ನೆಂಟರು, ಆಪ್ತರನ್ನು ಊಟಕ್ಕೆ ಕರೆಯುವುದು ಸಾಮಾನ್ಯ. ಆದರೆ, ಈ ಬಾರಿ ಹಬ್ಬ ಸೋಮವಾರ ಬಂದಿರುವುದರಿಂದ, ಸಿಹಿ ಊಟ ಮಾಡಲಾಗುತ್ತದೆ. ಮಂಗಳವಾರ ಬಾಡೂಟ ಮಾಡುತ್ತಾರೆ.