ಚಾಮರಾಜನಗರ: ಅಷ್ಟಮಂಗಲ ಪ್ರಶ್ನೆಯಡಿ ನಗರದ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಳೆದ ಮೂರು ದಿನದಿಂದ ನಡೆಯುತ್ತಿದ್ದ ಮಹಾಹೋಮ ಬುಧವಾರ ಮುಕ್ತಾಯವಾಯಿತು.
ಜ್ಯೋತಿಷಿ ರವಿ ಲಂಬೂದರಿ ನೇತೃತ್ವದಡಿ 35 ಜ್ಯೋತಿಷಿಗಳು ಹೋಮಹವನದಲ್ಲಿ ಪಾಲ್ಗೊಂಡಿದ್ದರು. ಜಿಲ್ಲೆಯ ಅಭಿವೃದ್ಧಿಗಾಗಿ ಮಹಾಹೋಮ ನಡೆಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಸಚಿವೆ ಶೋಭಾ ಕರಂದ್ಲಾಜೆ, ಎಂ.ಪಿ. ರೇಣುಕಾಚಾರ್ಯ ಅವರು ಕೊನೆಯ ದಿನದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಯಾರೊಬ್ಬರು ಮಹಾಹೋಮದತ್ತ ಮುಖ ಮಾಡಲಿಲ್ಲ.
ಅಂತಿಮ ದಿನದಂದು ಶ್ರೀರುದ್ರ ಮಹಾಯಾಗದ ಪೂರ್ಣಾಹುತಿ, ಆಶ್ಲೇಷ ಬಲಿಪೂಜೆ, ಸಾಯಿಜ್ಯ ಪೂಜಾ ಕಾರ್ಯಕ್ರಮ ನಡೆಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಟಿ. ಚಂದ್ರಶೇಖರ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಸುಂದರನಾಯ್ಕ, ಉಪ ಕಾರ್ಯದರ್ಶಿ ಗೂಡೂರು ಭೀಮಸೇನ, ಡಿವೈಎಸ್ಪಿ ಸಿ. ಬಸವರಾಜು, ಚೂಡಾ ಅಧ್ಯಕ್ಷ ಆರ್. ಸುಂದರ್ ಮತ್ತಿತರರು ಪಾಲ್ಗೊಂಡಿದ್ದರು.