ಬಳ್ಳಾರಿ: ನಗರದ ಅಲ್ಲಂ ಸುಮಂಗಲಮ್ಮ ಸ್ಮಾರಕ ಮಹಿಳಾ ಕಾಲೇಜಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಗುರುವಾರ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸ್ಥಳೀಯ ಗಾಂಧಿನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಯ ಕುಮಾರ್ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿ ಸಿದಂತೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಯುವತಿಯರು ಆಗಂತುಕರ ಬಗ್ಗೆ ಜಾಗೃತರಾಗಿರಬೇಕು. ಸಂಜೆ ಟ್ಯೂಷನ್ ಮತ್ತು ಸ್ನೇಹಿತೆಯರ ಮನೆಗಳಿಗೆ ಹಾಗೂ ಮಾರುಕಟ್ಟೆಗೆ ತೆರಳಬೇಕಾದ ಸಂದರ್ಭ ಬೆಲೆಬಾಳುವ ಆಭರಣ ಧರಿಸಬಾರದು. ಅಪರಿಚಿತರು ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಕೂಡಲೇ ಮಹಿಳಾ ಸಹಾಯವಾಣಿ ವಾಹನ `ದುರ್ಗಾ' ಸಹಾಯಕ್ಕಾಗಿ ಉಚಿತವಾಗಿ ಕರೆ ಮಾಡಬೇಕು (ಸಹಾಯವಾಣಿ ಸಂಖ್ಯೆ 78291- 81181) ಎಂದು ಅವರು ಸಲಹೆ ನೀಡಿದರು.
ಅಪರಿಚಿತರ ದೂರವಾಣಿ ಕರೆಗಳಿಗೆ ಸ್ಪಂದಿಸಬಾರದು. ಮೇಲಿಂದ ಮೇಲೆ ಅಂತಹ ಕರೆಗಳು ಬಂದಲ್ಲಿ ಪಾಲಕರ ಗಮನಕ್ಕೆ ತರಬೇಕು. ಅಥಾವ ಮಹಿಳೆಯ ರಕ್ಷಣೆಗಾಗಿ ಇರುವ ವಿಶೇಷ ವಾಹನ `ದುರ್ಗಾ'ದ ಸಹಾಯ ಕೋರಬೇಕು ಎಂದು ಅವರು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ನಲ್ಲೂ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗಾಂಧಿನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ವಾಸು ಕುಮಾರ್, ಅಪರಾದ ವಿಭಾಗದ ಸಬ್ ಇನ್ಸ್ಪೆಕ್ಟರ್ ಚಿದಾನಂದ ಗದಗ, ಪ್ರಾಚಾರ್ಯ ತೇಜಸ್ಮೂರ್ತಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.