ನವದೆಹಲಿ (ಐಎಎನ್ಎಸ್/ ಪಿಟಿಐ): ಭಾರತ ಮೂಲದ ಲೇಖಕಿ ಸುಷ್ಮಿತಾ ಬ್ಯಾನರ್ಜಿ ಅವರನ್ನು ಶಂಕಿತ ಆಫ್ಘನ್ ಉಗ್ರರು ಗುಂಡಿಟ್ಟು ಕೊಲೆ ಮಾಡಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಹತ್ಯೆ ಸಂಬಂಧ ಕಾಬೂಲ್ ಜತೆ ಭಾರತ ಸರ್ಕಾರ ಸಂಪರ್ಕ ಸಾಧಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ತಿಳಿಸಿದ್ದಾರೆ.
`ಆಪ್ಘನ್ ಸರ್ಕಾರದ ಜತೆಗೆ ಸಂಪರ್ಕದಲ್ಲಿದ್ದೇವೆ. ಆಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಬಲಪಡಿಸುವುದಕ್ಕೆ ನಾವು ಕೈಜೋಡಿಸುತ್ತೇವೆ' ಎಂದು ಸಂಸತ್ತಿನ ಆವರಣದಲ್ಲಿ ಅವರು ಸುದ್ದಿಗಾರರಿಗೆ ತಿಳಿಸಿದರು. `ಎರಡೂ ದೇಶಗಳು ಒಂದೇ ಧೋರಣೆ ಹೊಂದಿವೆ. ಮಹಿಳೆಯ ಮೇಲೆ ನಡೆದ ಅಮಾನವೀಯ ಹಲ್ಲೆಯ ವಿರುದ್ಧ ಹೋರಾಡಲು ಬದ್ಧತೆ ಹಾಗೂ ಸ್ಥಿರ ಸಂಕಲ್ಪ ಹೊಂದಿದ್ದೇವೆ' ಎಂದರು.
ರಾಜ್ಯಸಭೆ ಸಂತಾಪ: ಸುಷ್ಮಿತಾ ಹತ್ಯೆಯನ್ನು ರಾಜ್ಯಸಭೆ ಪಕ್ಷಾತೀತವಾಗಿ ಖಂಡಿಸಿತು. ತೃಣಮೂಲ ಕಾಂಗ್ರೆಸ್ನ ಕುನಾಲ್ ಕುಮಾರ್ ಘೋಷ್ ಈ ಪ್ರಸ್ತಾಪ ಮಾಡಿದರು.
ಕಾಂಗ್ರೆಸ್ನ ರಾಮಚಂದ್ರ ಕುಂತಿಯಾ, ಬಿಜೆಪಿಯ ನಜ್ಮಾ ಹೆಪ್ತುಲ್ಲಾ, ಸಮಾಜವಾದಿ ಪಕ್ಷದ ನರೇಶ್ ಅಗರವಾಲ್ ಈ ಹತ್ಯೆ ಅಮಾನವೀಯ ಎಂದರು. ಉಪಸಭಾಪತಿ ಪಿ.ಜೆ.ಕುರಿಯನ್, ಘಟನೆ ದುರದೃಷ್ಟಕರ ಎಂದರು.