ಹುಬ್ಬಳ್ಳಿ: ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಮೊದಲ ಪಿಎಚ್.ಡಿ ಪ್ರಬಂಧ ಡಾ. ಸರ್ವಮಂಗಳಾ ಎಂ. ಕುದರಿ ಅವರ `ಆಧುನಿಕ ಕನ್ನಡ ಸಾಹಿತ್ಯದಲ್ಲಿ ಅಕ್ಕಮಹಾದೇವಿ~ ಪುಸ್ತಕ ಶುಕ್ರವಾರ ಲೋಕಾರ್ಪಣೆಗೊಂಡಿತು.
ಮಹಿಳಾ ವಿದ್ಯಾಪೀಠದ ಮಹಾತ್ಮಾ ಗಾಂಧೀ ಪ್ರಾರ್ಥನಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಮಹಿಳಾ ವಿವಿ ಕುಲಪತಿ ಡಾ. ಮೀನಾ ಆರ್. ಚಂದಾವರಕರ ಪುಸ್ತಕ ಬಿಡುಗಡೆಗೊಳಿಸಿದರು. ಕೃತಿ ಲೋಕಾರ್ಪಣೆ ಮಾಡಿದ ಕುಲಪತಿ `ರಾಜ್ಯ ಮಹಿಳಾ ವಿಶ್ವವಿದ್ಯಾಲಯ ದಶಮಾನೋತ್ಸವ ಆಚರಿಸಲಾಗು ತ್ತಿದ್ದು, ಈ ನಿಮಿತ್ತ 10 ಕೃತಿಗಳನ್ನು ಪ್ರಕಟಿಸಲು ನಿರ್ಧರಿಸಲಾಗಿದೆ. ಸಂಶೋಧನೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೃತಿ ಪ್ರಕಟಿಸಲಾಗುತ್ತಿದೆ. ಸರ್ವಮಂಗಳಾ ಕುದರಿ ಅವರು ಅಕ್ಕಮಹಾದೇವಿ ಕುರಿತು ಸಂಶೋಧನೆ ನಡೆಸಿ ಮಂಡಿಸಿದ ಮಹಾಪ್ರಬಂಧ ವಿಶ್ವವಿದ್ಯಾಲಯದ ಮೊದಲ ಸಂಶೋಧನಾ ಕೃತಿಯಾಗಿದೆ~ ಎಂದು ಹೇಳಿದರು.
ಕೃತಿ ಕುರಿತು ಲೇಖಕಿ ಡಾ. ಶಾಂತಾ ಇಮ್ರಾಪುರ ಮಾತನಾಡಿದರು. ಆಧುನಿಕ ಕನ್ನಡ ಸಾಹಿತ್ಯಕ್ಕೆ ಅಕ್ಕನ ಕೊಡುಗೆ ಕುರಿತು ಮತ್ತೊಂದು ಕೃತಿ ಲೋಕಾರ್ಪಣೆಗೊಳ್ಳುತ್ತಿರುವುದು ಅವಳ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ~ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ `ಮಹಿಳಾ ವಿವಿ ಕಳೆದ 10 ವರ್ಷಗಳಿಂದ ಹಲವು ಕೆಲಸಗಳನ್ನು ಕೈಗೊಂಡಿದ್ದು, ಮಹಿಳೆಯರಿಗೆ ಪ್ರೇರಣಾ ಶಕ್ತಿಯಾಗಿ ನಿಂತಿದೆ~ ಎಂದರು.
ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸರ್ವಮಂಗಳಾ ಅವರ ಸಂಶೋಧನಾ ಮಾರ್ಗದರ್ಶಕಿ ಡಾ. ವಿಜಯಶ್ರೀ ಸಬರದ, ಮಹಿಳಾ ವಿದ್ಯಾಪೀಠದ ಅಧ್ಯಕ್ಷೆ ಡಾ. ಲಕ್ಷ್ಮಿಬಾಯಿ ಪಾಟೀಲ, ಕೆ.ಟಿ. ಪಾಟೀಲ ಮುಂತಾದವರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.