ವಿಜಾಪುರ: ‘ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಶಕ್ತಿಯಾಗಿ ಬೆಳೆದರೆ ಅಭಿವೃದ್ಧಿ ಸಂಪನ್ಮೂಲಗಳ ಸದ್ವಿನಿಯೋಗದ ಜೊತೆಗೆ ಭ್ರಷ್ಟಾಚಾರಕ್ಕೂ ಕಡಿವಾಣ ಹಾಕಬಹುದು’ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವೆ ಡಾ. ಡಿ. ಪುರಂದೇಶ್ವರಿ ಹೇಳಿದರು.
ಇಲ್ಲಿಯ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಎರಡನೆಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿ ಘಟಿಕೋತ್ಸವ ಭಾಷಣ ಮಾಡಿದರು.
‘ಶಿಕ್ಷಣದಿಂದಲೇ ಮಹಿಳಾ ಸಬಲೀಕರಣ ಸಾಧ್ಯ. ಪ್ರಪಂಚದ ಜನಸಂಖ್ಯೆಯಲ್ಲಿ ಶೇ.50ರಷ್ಟು ಮಹಿಳೆಯರಿದ್ದರೂ ಆರ್ಥಿಕ ಸ್ವಾವಲಂಬನೆ ಹೊಂದಿದವರ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇದೆ’ ಎಂದು ವಿಷಾದಿಸಿದರು.
ವಿಶ್ವವಿದ್ಯಾಲಯದ ಸಮ ಕುಲಾಧಿಪತಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಅವರು, ಕೇಂದ್ರ ಸಚಿವೆ ಡಾ.ಡಿ. ಪುರಂದೇಶ್ವರಿ, ಸಾಹಿತಿ ಡಾ. ಸಾರಾ ಅಬೂಬಕ್ಕರ್, ಉದ್ಯಮಿ ವಿದ್ಯಾ ಮುರಕುಂಬಿ, ಅಂತರರಾಷ್ಟ್ರೀಯ ಅಂಗವಿಕಲ ಕ್ರೀಡಾಪಟು, ಪದ್ಮಶ್ರೀ ಮಾಲತಿ ಹೊಳ್ಳ ಅವರಿಗೆ ಗೌರವ ಡಾಕ್ಟರೇಟ್ ಹಾಗೂ 60 ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ ಪ್ರದಾನ ಮಾಡಿದರು. ಕುಲಪತಿ ಡಾ.ಗೀತಾ ಬಾಲಿ, ಆಡಳಿತ ಮಂಡಳಿಯವರು ವೇದಿಕೆಯಲ್ಲಿದ್ದರು. ವಿವಿಯ ಕುಲಾಧಿಪತಿ, ರಾಜ್ಯಪಾಲ ಹಂಸರಾಜ ಭಾರದ್ವಾಜ ಪಾಲ್ಗೊಂಡಿರಲಿಲ್ಲ.