ಬೀರೂರು: ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆ ಆರೋಗ್ಯವಾಗಿರಬೇಕು ಎಂದು ದಾವಣಗೆರೆ ಎಸ್.ಎಸ್.ಇನ್ಸ್ಟಿಟ್ಯೂಟ್ನ ಡಾ.ಅಮಿತ್.ಎಂ.ರಾಯನಗೌಡರ್ ತಿಳಿಸಿದರು.
ಪಟ್ಟಣದ ಇನ್ನರ್ವ್ಹೀಲ್ ವತಿಯಿಂದ ಪತ್ರೆ.ಕೆ.ಚನ್ನವೀರಪ್ಪಯ್ಯ ಕಲ್ಯಾಣಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ 40ವರ್ಷ ಮೇಲ್ಪಟ್ಟ ಮಹಿಳೆಯರ `ಮೂಳೆ ಸಾಂದ್ರತೆ ತಪಾಸಣಾ ಶಿಬಿರ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬದ ಕಾಳಜಿಯಲ್ಲಿ ತನ್ನ ಪೋಷಣೆಗೆ ಮಹತ್ವ ನೀಡದ ಮಹಿಳೆ ನಲವತ್ತು ವಯಸ್ಸಿನ ನಂತರ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರ್ಲ್ಲಲಿ ಮೂಳೆ ಸವೆತವೂ ಒಂದಾಗಿದ್ದು ಮಿತ, ಉತ್ತಮ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಆರೋಗ್ಯ ತಪಾಸಣೆ ಮತ್ತು ಸ್ವಸ್ಥ ಜೀವನಶೈಲಿಯಿಂದ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು.
ಇನ್ನರ್ವ್ಹೀಲ್ ಅಧ್ಯಕ್ಷೆ ಸುಧಾ ಸೋಮಶೇಖರ್ ಮಾತನಾಡಿ, ಮಹಿಳೆಯರು ತಾವೂ ಆರೋಗ್ಯವಾಗಿದ್ದು ಕುಟುಂಬ ಸ್ವಾಸ್ಥ್ಯ ಕಾಪಾಡುವಲ್ಲಿ ಶ್ರಮಿಸಿದರೆ ಸಮಾಜ ದೃಢವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು. ಪಟ್ಟಣದ ವಿಶ್ವಮಾನವ ಆಸ್ಪತ್ರೆಯ ಡಾ.ಎಂ.ಡಿ.ಟೀಕಪ್ಪ ಮಾತನಾಡಿದರು.
ಶಿಬಿರದಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರ ಆರೋಗ್ಯ ತಪಾಸಣೆ ನಡೆಸಲಾಯಿತು. ಇನ್ನರ್ವ್ಹೀಲ್ ಕಾರ್ಯದರ್ಶಿ ನೀತೂ ವಸಂತ್, ಸುಧಾ ನಟರಾಜ್ ಇದ್ದರು.