ಬೆಂಗಳೂರು: ಕುಮಾರಸ್ವಾಮಿಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಮಹಿಳೆ ನೇಣು ಹಾಕಿಕೊಂಡಿದ್ದು, ಜೀವನ್ಬಿಮಾನಗರ ಬಳಿಯ ಕೋಡಿಹಳ್ಳಿಯಲ್ಲಿ ಗುರುವಾರ ಬೆಳಿಗ್ಗೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾಶಿನಗರ ಮುಖ್ಯರಸ್ತೆ ನಿವಾಸಿ ಕೃಷ್ಣಮೂರ್ತಿ ಎಂಬುವರ ಪತ್ನಿ ಮಾಲಾ (23) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮದುವೆಯಾಗಿ ಐದು ವರ್ಷಗಳಾಗಿದ್ದವು. ಗೃಹರಕ್ಷಕ ದಳದಲ್ಲಿ ಕೆಲಸ ಮಾಡುವ ಮಾಲಾ ಅವರಿಗೆ ಚೇತನ್ ಎಂಬ ಮಗನಿದ್ದಾನೆ. ಕೃಷ್ಣಮೂರ್ತಿ, ಗ್ಯಾರೇಜ್ ಒಂದರ ಉದ್ಯೋಗಿ.
ಮತ್ತೊಂದು ಪ್ರಕರಣ: ಕೋಡಿಹಳ್ಳಿ 14ನೇ ಮುಖ್ಯರಸ್ತೆ ನಿವಾಸಿ ರಾಜು (45) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರಾಜು, ಪತ್ನಿ ಶಿವಗಾಮಿ ಮತ್ತು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪತ್ನಿ ಮತ್ತು ಮಕ್ಕಳು ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಅವರು ನೇಣು ಹಾಕಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜೀವನ್ಬಿಮಾನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಮತ್ತೊಂದು ಪ್ರಕರಣ (ಯಲಹಂಕ):
ಇಲ್ಲಿಗೆ ಸಮೀಪದ ಕೋಗಿಲು ಕೆರೆಯ ಬಳಿಯಲ್ಲಿ ಬುಧವಾರ ರಾತ್ರಿ ಇಲ್ಲಿನ ಗಾಂಧಿನಗರದ ನಿವಾಸಿ ಮುರಳಿ (27) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಳು ವರ್ಷಗಳ ಹಿಂದೆ ಹೇಮಲತಾ ಎಂಬಾಕೆಯನ್ನು ಪ್ರೇಮ ವಿವಾಹವಾಗಿದ್ದ. ಕಟ್ಟಿಗೇನಹಳ್ಳಿಯಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ಮುರಳಿ, ಇತ್ತೀಚೆಗೆ ತುಂಬಾ ಸಾಲ ಮಾಡಿಕೊಂಡಿದ್ದ.
ಬುಧವಾರ ಸಂಜೆ 4.30 ಗಂಟೆಗೆ ಮನೆಯಿಂದ ಹೊರಗೆ ತೆರಳಿದ್ದ. ಸಂಜೆ 6.30 ಗಂಟೆಗೆ ಪತ್ನಿಗೆ ಕರೆ ಮಾಡಿ ಮಾತನಾಡಿದ್ದಾನೆ. ನಂತರ ಪತ್ನಿ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸಿಲ್ಲ. ರಾತ್ರಿ ಮನೆಗೂ ಬಂದಿರಲಿಲ್ಲ. ಗುರುವಾರ ಬೆಳಿಗ್ಗೆ ಕೆರೆಯ ಬಳಿ ಶವ ಪತ್ತೆಯಾಯಿತು.