ಮಂಡ್ಯ: ಮಹಿಳೆಯರ ಮತ್ತು ಮಕ್ಕಳ ಸಾಗಣೆ ಕೃತ್ಯಗಳು ಇಂದು ಅವಿರತವಾಗಿ ನಡೆಯುತ್ತಿರುವುದು ಸಮಾಜಕ್ಕೆ ಕಂಟಕವಾಗಿದೆ. ಇದನ್ನು ತಡೆಗಟ್ಟುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ ಹೇಳಿದರು.
ಜಿಲ್ಲಾ ಆಡಳಿತ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣ ಘಟಕ, ಮಕ್ಕಳ ಸಹಾಯವಾಣಿ, ಮಕ್ಕಳ ಕಲ್ಯಾಣ ಸಮಿತಿ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಿಳೆಯರು ಮತ್ತು ಮಕ್ಕಳ ಸಾಗಣೆ ತಡೆಗಟ್ಟುವ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಾವುದೇ ದೇಶದ ಅಭಿವೃದ್ಧಿಯನ್ನು ಅಲ್ಲಿನ ಕಟ್ಟಡಗಳು, ರಸ್ತೆಗಳ ಮೂಲಕ ಅಳೆಯಬಾರದು. ಆ ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಸಿಗುತ್ತಿರುವ ರಕ್ಷಣೆ, ಆರೋಗ್ಯ, ಶಿಕ್ಷಣವನ್ನು ಆಧರಿಸಿ ಅಭಿವೃದ್ಧಿ ಅರ್ಥೈಸಬೇಕಿದೆ ಎಂದರು. ಮಕ್ಕಳನ್ನು ಸಾಗಣೆ ಮಾಡಿ ಅಂಗಾಂಗಗಳನ್ನು ಊನ ಮಾಡಿ ಭಿಕ್ಷೆಗೆ ದೂಡುವಂಥ ಹೀನ ಕೃತ್ಯಗಳು ನಡೆಯುತ್ತಿವೆ. ಅಲ್ಲದೇ, ಎಳೆಯ ವಯಸ್ಸಿನ ಹೆಣ್ಣು ಮಕ್ಕಳನ್ನು ವೈಶ್ಯಾವಾಟಿಕೆಗೆ ನೂಕುವ ಕೆಲಸಗಳೂ ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಐಎಎಸ್ ಪ್ರೊಬೇಷನರಿ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮಾತನಾಡಿ, ಪ್ರತಿಯೊಬ್ಬರೂ ಮಕ್ಕಳು ಮತ್ತು ಮಹಿಳೆಯರನ್ನು ಗೌರವಿಸಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಿಮಲಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ. ಎಸ್.ದಿವಾಕರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮಿಕ್ಕೆರೆ ವೆಂಕಟೇಶ್, ಸದಸ್ಯ ತಿರುಮಲಾಸ್ವಾಮಿ, ಮಾನವ ಸಾಗಾಣಿಕೆ ಬಗೆಗೆ ಸಂಶೋಧನೆ ನಡೆಸುತ್ತಿರುವ ವಿದೇಶಿಯರಾದ ಸಾರಾ ಮತ್ತು ಶ್ಯಾನ್ ಇದ್ದರು.