ನ್ಯಾಮತಿ: ಮಹಿಳೆಯರು ನಾಲ್ಕು ಗೋಡೆಗಳ ಮಧ್ಯೆ ಇರದೇ, ಸಾಮಾಜಿಕ ಅನುಭವಗಳನ್ನು ಪಡೆಯುವುದರ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಚಿವ ಎಂ.ಪಿ. ರೇಣುಕಾಚಾರ್ಯ ಅಭಿಪ್ರಾಯಪಟ್ಟರು.
ಸಮೀಪದ ಕೋಡಿಕೊಪ್ಪ ಗ್ರಾಮದಲ್ಲಿ ಈಛೆಗೆ ಬಾಲಕಿಯರ ಪದವಿಪೂರ್ವ ಕಾಲೇಜಿನ ಎನ್ನೆಸ್ಸೆಸ್ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲೇ ಪ್ರಥಮ ಮಹಿಳಾ ಎನ್ನೆಸ್ಸೆಸ್ ಇದಾಗಿರುವುದು ಹೆಮ್ಮೆಯ ವಿಷಯ. ಶಿಬಿರದಲ್ಲಿ ಪಡೆದ ಅನುಭವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಸುತ್ತಮುತ್ತಲ ಜನರಿಗೆ ಸಹಾಯ ಮಾಡುವ ಮನೋಭಾವ ಬೆಳಸಿಕೊಳ್ಳಬೇಕು. ಸ್ವಾವಲಂಬನೆ ಬದುಕು ಕಲಿಯಬೇಕು ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಎಸ್. ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಸಿಡಿಸಿ ಸದಸ್ಯರಾದ ವಿರೂಪಾಕ್ಷಪ್ಪ, ಮಮತಾರಾಜ್, ಮೀನಾಕ್ಷಿ ಮಾಸ್ಟಿ, ಸಹಶಿಕ್ಷಕ ಕೆ. ಸಿದ್ದರಾಮಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಇದೇ ವೇಳೆ ಗ್ರಾಮಸ್ಥರ ಪರವಾಗಿ ಸಚಿವರನ್ನು ಸನ್ಮಾನಿಸಲಾಯಿತು.
ಉಪನ್ಯಾಸಕ ಎಸ್. ಆರ್. ಬಸವರಾಜಪ್ಪ ಸ್ವಾಗತಿಸಿದರು. ಶಿಬಿರಾಧಿಕಾರಿ ಎಂ. ಸಾಕಮ್ಮ ವಂದಿಸಿದರು.
ಕಾಳಿಕಾಂಬಾ ಉತ್ಸವ ವಿಜಯದಶಮಿಯ ಮಾರನೆದಿನ ಗ್ರಾಮದೇವತೆ ಕಾಳಿಕಾಂಬಾ ದೇವಿಯ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಕೊನೆಯ ದಿನ ಮುತ್ತೈದೆಯರಿಗೆ ಉಡಿ ತುಂಬಿ, ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ವಿಶ್ವಕರ್ಮ ಬ್ರಾಹ್ಮಣ ಸಮಾಜದ ಅಧ್ಯಕ್ಷ ನಾಗೇಂದ್ರಾಚಾರ್, ಪುರಾಣ ವಾಚಕರಾದ ವಿರೂಪಾಕ್ಷಾಚಾರ್, ಹೊನ್ನಾಳಿಯ ವೀರಭದ್ರಾಚಾರ್ ಹಾಗೂ ಸಮಾಜದ ಹಿರಿಯರು, ಯುವಕರು ಕಾರ್ಯಕ್ರಮವನ್ನು ಆಯೋಜಿಸಿದ್ದರು.