ವಿಜಾಪುರ: ಕರುಣೆ, ವಾತ್ಸಲ್ಯ, ಸಹನೆ ಇವು ಮಹಿಳೆಯರಿಗೆ ನಿಸರ್ಗದತ್ತವಾಗಿ ಬಂದಿರುವ ಕೊಡುಗೆಗಳು ಎಂದು ಬಿಎಲ್ಡಿಇ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಕೆ.ಎಸ್. ಬಿರಾದಾರ ಹೇಳಿದರು.
ಇಲ್ಲಿಯ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಹಾಗೂ ಬಿ.ಎಲ್.ಡಿ.ಇ. ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಸಹಯೋದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಎನ್.ಎಸ್.ಎಸ್. ನಾಯಕತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಹಿಳಾ ವಿವಿಯ ಎನ್ಎಸ್ಎಸ್ ಸಮನ್ವಯ ಅಧಿಕಾರಿ ಡಾ.ಆರ್.ವಿ. ಗಂಗಶೆಟ್ಟಿ, ಎನ್.ಎಸ್.ಎಸ್. ಶಿಬಿರಾರ್ಥಿಗಳು ಒಳ್ಳೆಯ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ರಾಜ್ಯ ಮತ್ತು ರಾಷ್ಟ್ರವನ್ನು ಕಟ್ಟುವಲ್ಲಿ ಮಹತ್ತರ ಪಾತ್ರವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಹ ಪ್ರಾಧ್ಯಾಪಕ ಪ್ರೊ.ಡಿ.ವೈ. ಉಪ್ಪಾರ, ಎನ್.ಎಸ್.ಎಸ್. ಶಿಬಿರಾರ್ಥಿಗಳ ಶ್ರಮದಾನವನ್ನು ಕೊಂಡಾಡಿದರು. ಅಯೂಬ್ ಪಾರ್ಥನಳ್ಳಿ, ತಿವಾರಿ, ಡಾ.ಎಸ್.ಬಿ. ಬಿರಾದಾರ, ವಿ.ಜೆ. ಪಾರೇಖ, ಜೆ.ಎಂ. ಸಜ್ಜನ, ಮಸೂತಿ ಅವರನ್ನು ಸನ್ಮಾನಿಸಲಾಯಿತು. ಪ್ರೊ.ಎಸ್.ಬಿ. ದೇಸಾಯಿ, ನರೇಶ ಪೊದ್ದಾರ್ ಉಪಸ್ಥಿತರಿದ್ದರು.
ಪ್ರೊ.ಸಿ.ಎ. ಚಾಂದಕವಟೆ ವರದಿ ವಾಚನ ಮಾಡಿದರು. ಶ್ವೇತಾ ಜೆ. ಗುಬುರ ಸ್ವಾಗತಿಸಿದರು. ಅಮೃತಾ ಕಮಟ್ಟಗಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಎಚ್.ಎಂ. ಮುಜಾವರ ವಂದಿಸಿದರು.
ಎಮ್ಮೆಗಳ ವಿತರಣೆ
ವಿಜಾಪುರ: ಇಂಡಿ ತಾಲ್ಲೂಕಿನ ಝಳಕಿ ಗ್ರಾಮದಲ್ಲಿ ಸಮೃದ್ಧ ಜೀವನ ಫುಡ್ಸ್ ಇಂಡಿಯಾ ಲಿಮಿಟೆಡ್ ಕಂಪೆನಿ ವತಿಯಿಂದ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಎಮ್ಮೆಗಳನ್ನು ವಿತರಿಸಲಾಯಿತು.
ಕಂಪೆನಿಯ ಚೇರಮನ್ ಮಹೇಶ ಮೊತೆ ಬಡ ರೈತರಿಗೆ ಈ ಎಮ್ಮೆಗಳನ್ನು ವಿತರಿಸಿ ಮಾತನಾಡಿ, ಸಮೃದ್ಧ ಕಿಸಾನ್ ಯೋಜನೆ ಅಡಿಯಲ್ಲಿ ಬಡ ರೈತರಿಗೆ ಎಮ್ಮೆಗಳನ್ನು ಕೊಡಲಾಗುವದು. ಇದರಿಂದ ಕೃಷಿ ಆಧಾರಿತ ಹಾಲು ಉತ್ಪಾದನೆಗೆ ಚಾಲನೆ ಸಿಗಲಿದೆ. ಈ ಯೋಜನೆಯ ಮುಖಾಂತರ ದಿನಾಲು 7 ರಿಂದ 10 ಲೀಟರ್ ಹಾಲು ಕೊಡುವ ಎಮ್ಮೆ ಕೊಡಲಾಗುವದು. ಈ ಹಾಲನ್ನು ಕಂಪೆನಿಯೇ ಖರೀದಿಸುವುದು.
ಎಮ್ಮೆ ಹಾಲು ಕೊಡುವುದು ನಿಲ್ಲಿಸಿದಾಗ ಮತ್ತೊಂದು ಎಮ್ಮೆ ಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಮೃದ್ಧ ಜೀವನ ಫುಡ್ಸ್ ಇಂಡಿಯಾ ಲಿಮಿಟೆಡ್ನ ಅಧಿಕಾರಿಗಳು ಹಾಗೂ ಜಿಲ್ಲೆಯ ಹಲವು ರೈತರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.