ಮಂಗಳೂರು: ‘ಮಹಿಳೆಯ ರಕ್ಷಣೆ ಎಲ್ಲರ ಹೊಣೆ. ಅದು ಆಕೆಗೆ ನೀಡುವ ಭಿಕ್ಷೆ ಅಲ್ಲ, ಅದು ಆಕೆಯ ಹಕ್ಕು. ಮಹಿಳೆಯನ್ನು ರಕ್ಷಿಸದ ಸರ್ಕಾರ ಆಳಲು ನಾಲಾಯಕ್ಕು’ ಎಂದು ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಕಿಡಿಕಾರಿದ್ದಾರೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಶ್ರಯದಲ್ಲಿ ಇಲ್ಲಿನ ಎಸ್ಡಿಎಂ ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದ ‘ಸುರಕ್ಷಿತ ಮಹಿಳೆ– ಸ್ವಸ್ಥ ಸಮಾಜ’ ದುಂಡು ಮೇಜಿನ ಸಮ್ಮೇಳನದಲ್ಲಿ ಅವರು ತಾವು ಪ್ರತಿನಿಧಿಸುವ ಕಾಂಗ್ರೆಸ್ ಪಕ್ಷದ ಆಡಳಿತದ ವಿರುದ್ಧವೇ ಅಸಮಾಧಾನ ತೋರಿದರು.
‘ಸರ್ಕಾರ ಇನ್ನೂ ಮಹಿಳಾ ಆಯೋಗಕ್ಕೆ ಅಧ್ಯಕ್ಷರನ್ನು ನೇಮಿಸಿಲ್ಲ. ಮಹಿಳೆಗೆ ರಕ್ಷಣೆ ಒದಗಿಸಲು ಸಾಧ್ಯವಾಗದಿದ್ದರೆ ಗೃಹಸಚಿವರು ಆ ಹೊಣೆಯನ್ನು ಬೇರೆಯವರಿಗೆ ಕೊಡಬೇಕು. ಗೃಹ ಸಚಿವಾಲಯ ಪರಿಣಾಮಕಾರಿಯಾಗಿ ಕೆಲಸ ಮಾಡದಿದ್ದರೆ ನಾನೂ ಹೋರಾಡುತ್ತೇನೆ. ಕಾಂಗ್ರೆಸ್ ಪಕ್ಷದಲ್ಲೇ ಇದ್ದರೂ ಸರ್ಕಾರವನ್ನು ಚುಚ್ಚುವ ಕೆಲಸ ಮಾಡುತ್ತೇನೆ’ ಎಂದರು. ‘ಮಹಿಳೆ ನಿರ್ಭೀತಿಯಿಂದ ಓಡಾಡುವ ವಾತಾವರಣ ಇಂದಿಗೂ ನಿರ್ಮಾಣವಾಗಿಲ್ಲ. ಅಪರಾಧ ಕೃತ್ಯಗಳಿಗೆ ಧರ್ಮ, ರಾಜಕಾರಣದ ಬಣ್ಣ ಹಚ್ಚದೆ ಒಗ್ಗೂಡಿ ಖಂಡಿಸಬೇಕು’ ಎಂದರು.
ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾತನಾಡಿ, ‘ಹದಿಹರೆಯದ ಹೆಣ್ಣುಮಕ್ಕಳ ಕಣ್ಮರೆ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿರುವುದು ರಾಷ್ಟ್ರಕ್ಕೇ ದೊಡ್ಡ ಸವಾಲು. ಈ ಹಿಂದೆ ಆಯೋಗದ ನೇತೃತ್ವದಲ್ಲಿ ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಸಿದ್ದೆವು. ಅದನ್ನು ಸರ್ಕಾರ ಅನುಷ್ಠಾನ ಗೊಳಿಸಬೇಕು’ ಎಂದರು.