ಬೀದರ್: `ಮಹಿಳೆಯರು ಉದ್ಯಮ ಶೀಲರಾಗಲು ಮುಂದಾಗುವ ಮೂಲಕ ತಮ್ಮ ಸಾಮರ್ಥ್ಯ ಪ್ರಕಟಿಸಬೇಕು. ಸಮಾಜ ಕೂಡಾ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಆಸಕ್ತ ಮಹಿಳೆಯ ರಿಗೆ ಸ್ಪಂದಿಸಬೇಕು~ ಎಂದು ಗುರು ನಾನಕ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷೆ ರೇಷ್ಮಾ ಕೌರ್ ಭಾನುವಾರ ಅಭಿಪ್ರಾಯಪಟ್ಟರು.
ಗುರುನಾನಕ್ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಗ್ಯಾನ್ಟ್ರೀ ಸಂಸ್ಥೆಯ ಸಹಯೋಗದಲ್ಲಿ ನಡೆದ `ಉದ್ಯಮಶೀಲತಾ ಆಭಿವೃದ್ಧಿ~ ಕಾರ್ಯಕ್ರಮ ಉದ್ಘಾಟಿಸಿದ ಅವರು, ಅಧ್ಯಯನ ಪ್ರಕಾರ, ಮಹಿಳಾ ಉದ್ಯಮಶೀಲರ ಸಂಖ್ಯೆಯಲ್ಲಿ ದೇಶದಲ್ಲೇ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ ಎಂದರು.
ಮಹಿಳೆಯರು ಉದ್ಯಮಶೀಲರಾಗಲು ಸವಾಲುಗಲು ಸಾಕಷ್ಟಿವೆ. ಬಂಡವಾಳದ ಸಮಸ್ಯೆ, ಪುರುಷ ಪ್ರದಾನವಾದ ಸಮಾಜ, ಸಾಕ್ಷರತೆಯ ಕೊರತೆ ಕೆಲ ಪ್ರಮುಖ ಕಾರಣಗಳು. ಇದರಿಂದ ಹೊರಬರಲು ಮಹಿಳೆಯರಿಗೆ ಅಗತ್ಯ ತರಬೇತಿಯೂ ಅಗತ್ಯ. ಇದೇ ದೃಷ್ಟಿಯಿಂದ ಗುರುನಾನಕ್ ಶಿಕ್ಷಣ ಸಂಸ್ಥೆವಾರ್ಷಿಕ ಎರಡು ಬಾರಿ ಕಾರ್ಯಾಗಾರ ಆಯೋಜಿಸಿ ಆಸಕ್ತರಿಗೆ ಉತ್ತೇಜನ ನೀಡುತ್ತಿದೆ ಎಂದರು.
ಗ್ಯಾನ್ ಟ್ರೀ ಸಂಸ್ಥೆಯ ವೈಶಾಲಿ ನಿಟ್ಟೂರ್ಕರ್ ಅವರು, `ಯುವತಿಯರು ಕೇವಲ ವೈದ್ಯಕೀಯ, ಎಂಜಿನಿಯರಿಂಗ್ ಶಿಕ್ಷಣದತ್ತಲೇ ಕೇಂದ್ರೀಕರಿಸುವ ಬದಲಿಗೆ ಉದ್ಯಮಶೀಲತೆ ಕುರಿತು ಚಿಂತಿಸಬೇಕು. ಸ್ಪಷ್ಟ ಚಿಂತನೆ, ಗುರಿಯೊಂದಿಗೆ ಈ ಕ್ಷೇತ್ರವನ್ನು ಪ್ರವೇಶಿಸಿದಲ್ಲಿ ಸಾಧನೆಗೆ ವಿಫುಲ ಅವಕಾಶಗಳಿವೆ ಎಂದರು.
ಶಿಕ್ಷಣ ಮತ್ತು ಉದ್ಯಮಶೀಲತೆ ಪ್ರಗತಿಯ ಎರಡು ಮಾರ್ಗಗಳು. ಇಂದು ಉದ್ಯೋಗವನನು ಪಡೆಯಲು ಕೂಡಾ ಕೆಲವೊಂದು ದಕ್ಷತೆ ಅಗತ್ಯ. ಆ ದೃಷ್ಟಿಯಿಂದಲೂ ಉದ್ಯಮಶೀಲತೆ ಪೂರಕವಾಗಿದೆ ಎಂದರು.
ಪಶುವೈದ್ಯಕೀಯ ವಿದ್ಯಾಲಯದ ಡಾ. ಸತೀಶ್ ಬಿರಾದಾರ್, ವೀರೇಂದ್ರ ಪಾಟೀಲ್ ಮತ್ತು ಕೃಷಿ ವಿಜ್ಞಾನ ಕೇಂದ್ರದ ರವಿ ದೇಶಮುಖ ಅವರು, ಉದ್ಯಮ ಶೀಲತೆಯ ವಿವಿಧ ಸಾಧ್ಯತೆಗಳನ್ನು ಕುರಿತು ಮಾತನಾಡಿದರು. ಗ್ಯಾನ್ಟ್ರೀ ಸಂಸ್ಥೆಯ ಹೇಮಂತ್ ನಿಟ್ಟೂರ್ಕರ್ ಅವರೂ ವೇದಿಕೆಯಲ್ಲಿದ್ದರು.