ಮಾಗಡಿ: ಕನ್ನಡ ಸಾರಸತ್ವ ಲೋಕಕ್ಕೆ ಹತ್ತಾರು ಮಹತ್ವದ ದಾಖಲೆಗಳನ್ನು ನೀಡಿರುವ ಮಾಗಡಿಯ ಚಾರಿತ್ರಿಕ ಹಿನ್ನೆಲೆಗಳನ್ನು ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕಿದೆ ಎಂದು ಹಿರಿಯ ಕವಿ ಡಿ.ಆರ್.ಚಂದ್ರ ಮಾಗಡಿ ತಿಳಿಸಿದರು.
ಅವರು ಪಟ್ಟಣದ ಬಿ.ಜಿ.ಎಸ್.ಕಾಲೇಜಿನಲ್ಲಿ ನಡೆದ ಬಿ.ಜಿ.ಎಸ್. ಹಬ್ಬದಲ್ಲಿ ಭಾಗವಹಿಸಿ ಮಾತನಾಡಿದರು.
ಏಷ್ಯಾಖಂಡದಲ್ಲಿಯೇ 2ನೇ ಏಕಶಿಲ ಬೆಟ್ಟ ಸಾವನದುರ್ಗದ ಅರಣ್ಯ ಪ್ರದೇಶದಲ್ಲಿ 650 ವಿವಿಧ ಜಾತಿಯ ಗಿಡಮೂಲಿಕಾ ಸಸ್ಯಗಳನ್ನು ಪತ್ತೆ ಮಾಡಿರುವುದಾಗಿ ಪ್ರವಾಸಿ ಕರ್ನಲ್ ಬ್ರಾನ್ಫಿಲ್ ತನ್ನ ಪ್ರವಾಸಿ ಕಥನದಲ್ಲಿ ದಾಖಲಿಸರುವುದು ಮಾಗಡಿಯ ಚರಿತ್ರೆಗೆ ಹಿಡಿದ ಕೈಗನ್ನಡಿ. ಇಲ್ಲಿನ ಹತ್ತಾರು ಅವಿಸ್ಮರಣೀಯ ಸ್ಮಾರಕಗಳು ಮತ್ತು ಕಲ್ಯಾಣಿ, ಕೆರೆಕಟ್ಟೆಗಳ ಒತ್ತುವರಿಯನ್ನು ತಡೆಯದಿದ್ದರೆ ಮುಂದಿನ ಜನಾಂಗಕ್ಕೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಅವರು ಹೇಳಿದರು.
ಸಾನಿಧ್ಯ ವಹಿಸಿದ್ದ ಸೌಮ್ಯನಾಥ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದರ ಜೊತೆಗೆ ರಾಷ್ಟ್ರೀಯತೆಯನ್ನೂ ಬೆಳೆಸಿಕೊಳ್ಳಬೇಕಿದೆ ಎಂದರು.
ಬೆಂಗಳೂರಿನ ನಟರಾಜ್ ಮಾತನಾಡಿ, ಮೌಲ್ಯಯುತ ಸಮಾಜ ಬೆಳೆಸಲು ಅಧ್ಯಾಪಕರು ಶ್ರಮಿಸಬೇಕಿದೆ ಎಂದರು.
ಕೆಪಿಸಿಸಿ ಸದಸ್ಯ ಎ. ಮಂಜು, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಚಿಗಳೂರು ಗಂಗಾಧರ್, ಪುರಸಭೆಯ ಅಧ್ಯಕ್ಷ ಪುರುಷೋತ್ತಮ್, ಬಿಡಿಎ ಅಧಿಕಾರಿ ಡಾ.ಕೆ.ಪುಟ್ಟಸ್ವಾಮಿ, ಪುರಸಭೆ ಸಸ್ಯೆ ರತ್ನಮ್ಮ ರಂಗೇಗೌಡ ಕಲಾವಿದ ಸಿದ್ದರಾಮು, ಮುಖ್ಯಶಿಕ್ಷಕಿ ಬಿಸಜಾಕ್ಷಮ್ಮ, ಪ್ರಾಂಶುಪಾಲ ಕೆ. ಉಮೇಶ್ ಇತರರು ವೇದಿಕೆಯಲ್ಲಿದ್ದರು.
ಕಾಲೇಜಿನ ಮಕ್ಕಳಿಂದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.