ಬೆಂಗಳೂರು: ಮಾಜಿ ರಾಜ್ಯಪಾಲರಾದ ಡಾ.ವಿ.ಎಸ್.ರಮಾದೇವಿ (79) ಅವರು ತೀವ್ರ ಹೃದಯಾಘಾತದಿಂದ ಬುಧವಾರ ನಗರದಲ್ಲಿ ನಿಧನರಾದರು.`ದೀರ್ಘ ಕಾಲದಿಂದ ಮಧುಮೇಹದಿಂದ ಬಳಲುತ್ತಿದ್ದ ಅವರು, ಮಧ್ಯಾಹ್ನದ ಊಟದ ನಂತರ ಮನೆಯಲ್ಲಿ ಕುಸಿದು ಬಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದರು' ಎಂದು ಕುಟುಂಬ ಮೂಲಗಳು ತಿಳಿಸಿವೆ.
ರಮಾದೇವಿ ಅವರು ಪುತ್ರ ವಿ.ಎಸ್.ರಾಕೇಶ್, ಪುತ್ರಿಯರಾದ ವಿ.ಎಸ್.ರೇಖಾ, ವಿ.ಎಸ್.ರಾಧಿಕಾ ಚೌಧರಿ ಹಾಗೂ ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ.
ಆಂಧ್ರಪ್ರದೇಶ ಮೂಲದವರಾದ ರಮಾದೇವಿ ಅವರು ಮಾರ್ಚ್ 15, 1934ರಂದು ಜನಿಸಿದ್ದರು. ಅವರು ಕೇಂದ್ರ ಚುನಾವಣಾ ಆಯೋಗದ ಏಕೈಕ ಮಹಿಳಾ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. ಜುಲೈ 26, 1997ರಿಂದ ಡಿಸೆಂಬರ್ 1, 1999ರ ವರೆಗೆ ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಹಾಗೂ ಡಿಸೆಂಬರ್ 2, 1999ರಿಂದ ಮೇ 20, 2002ರ ವರೆಗೆ ಕರ್ನಾಟಕದ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸಿದ್ದರು.