ನವದೆಹಲಿ (ಪಿಟಿಐ): 2ಜಿ ಸ್ಟೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದ ಆರೋಪಿಗಳಾದ ಮಾಜಿ ಸಚಿವ ಎ.ರಾಜಾ ಹಾಗೂ ಇತರ ಮೂವರ ನ್ಯಾಯಾಂಗ ಬಂಧನದ ಅವಧಿಯನ್ನು ದೆಹಲಿ ಕೋರ್ಟ್ ಇದೇ 31ರವರೆಗೆ ವಿಸ್ತರಿಸಿದೆ.
ರಾಜಾ, ಅವರ ಮಾಜಿ ಆಪ್ತ ಕಾರ್ಯದರ್ಶಿ ಆರ್.ಕೆ.ಚಂದೋಲಿಯ, ದೂರಸಂಪರ್ಕ ಕಾರ್ಯದರ್ಶಿ ಸಿದ್ಧಾರ್ಥ್ ಬೇಹೂರ ಮತ್ತು ಸ್ವಾನ್ ಟೆಲಿಕಾಂನ ಪ್ರವರ್ತಕ ಶಾಹಿದ್ ಬಲ್ವ ಅವರನ್ನು ಇಲ್ಲಿನ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಈ ನಾಲ್ವರನ್ನೂ ಸಿಬಿಐನ ವಿಶೇಷ ನ್ಯಾಯಾಧೀಶ ಒ.ಪಿ.ಸೈನಿ ಅವರ ಎದುರು ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರುಪಡಿಸಲು ಉದ್ದೇಶಿಸಲಾಗಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಖುದ್ದಾಗಿಯೇ ಹಾಜರುಪಡಿಸಲಾಯಿತು.
ಆರೋಪಿಗಳು ಸಾಕಷ್ಟು ಪ್ರಭಾವಿಗಳಾಗಿದ್ದು ಹೊರಬಂದರೆ ಸಾಕ್ಷ್ಯವನ್ನು ತಿರುಚುವ ಸಾಧ್ಯತೆ ಇದೆ. ತನಿಖೆ ಇನ್ನೂ ಪೂರ್ಣಗೊಳ್ಳದಿರುವುದರಿಂದ ಆರೋಪಿಗಳ ಬಂಧನದ ಅವಧಿಯನ್ನು ವಿಸ್ತರಿಸಬೇಕು ಎಂಬ ಸಿಬಿಐ ಮನವಿಯನ್ನು ನ್ಯಾಯಾಧೀಶರು ಪುರಸ್ಕರಿಸಿದರು.