ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃತ್ವ ಶಕ್ತಿ ಕ್ಷೀಣಿಸುತ್ತಿರುವ ಸಮಾಜದಲ್ಲಿ...

Last Updated 22 ಅಕ್ಟೋಬರ್ 2010, 18:30 IST
ಅಕ್ಷರ ಗಾತ್ರ


ನೂರು ಜಲುಮದಲೂ ಹೆಣ್ಣು ಜಲುಮವೇ ಇರಲಿ
ಹರಸವ್ವ ಕೋಲು ಕೋಲೇ
ಹಾದಿ ನಡುವಲಿ ಆರದಿರಲಿ ಆತುಮ ದೀಪ
ಕಾಯವ್ವ ಕೋಲು ಕೋಲೇ
ಎಂದು ಹಾಡಿದ ವೈದೇಹಿ ತಮ್ಮ ಕವಿತೆ, ಕಥೆ, ಬರಹಗಳಲ್ಲಿ ಮಾತೃಶಕ್ತಿಯ ವಿವಿಧ ಆಯಾಮಗಳನ್ನು ತೆರೆದಿಟ್ಟವರು. ಕುಟುಂಬ ಮತ್ತು ಸಮಾಜ ವ್ಯವಸ್ಥೆಯಡಿ ದಮನಕ್ಕೊಳಗಾದ ಹೆಣ್ಣಿನ ಸ್ಥಿತಿಯನ್ನು ಅದರೆಲ್ಲಾ ಸೂಕ್ಷ್ಮಗಳೊಂದಿಗೆ ಪರಿಭಾವಿಸಿದ ಲೇಖಕಿ ಇವರು. ‘ಬಿಂದು ಬಿಂದಿಗೆ’, ‘ಪಾರಿಜಾತ’, ‘ಅಮ್ಮಚ್ಚಿಯೆಂಬ ನೆನಪು’, ‘ಕ್ರೌಂಚ ಪಕ್ಷಿಗಳು’, ‘ಮಲ್ಲಿನಾಥನ ಧ್ಯಾನ’, ‘ಜಾತ್ರೆ’, ‘ಅಸ್ಪೃಶ್ಯರು’- ಹೀಗೆ ಹಲವಾರು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ವೈದೇಹಿಯವರು ಕನ್ನಡ ಸಾಹಿತ್ಯಲೋಕದಲ್ಲಿ ಸಹಜ, ಆಪ್ತ, ಆರ್ದ್ರ ಹಾಗೂ ಖಚಿತ ನಿಲುವಿನ ಲೇಖಕಿ.

ಕನ್ನಡದ ಹೆಮ್ಮೆಯ ಲೇಖಕಿಗೆ ಇದೀಗ, ಅಕ್ಟೋಬರ 29ರಿಂದ 31ರವರೆಗೆ ಮೂಡುಬಿದಿರೆಯಲ್ಲಿ ನಡೆಯುವ ಕನ್ನಡ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ 2010’ಯ ಅಧ್ಯಕ್ಷತೆಯ ಗೌರವ. ಈ ಹಿನ್ನೆಲೆಯಲ್ಲಿ ವೈದೇಹಿ ಅವರನ್ನು, ಅವರ ಮನೆ ‘ಇರುವಂತಿಗೆ’ಯ ಚಾವಡಿಯಲ್ಲಿ ಮಾತನಾಡಿಸಿದಾಗ-

ಆಳ್ವಾಸ್ ನುಡಿಸಿರಿಯ ಮಹತ್ವವೇನು?
ಒಂದು ಭಾಷೆ, ಸಂಸ್ಕೃತಿಗೆ ಸಮ್ಮೇಳನಗಳು ಶಕ್ತಿ ತುಂಬುವ ಕಾರ್ಯ ಮಾಡುತ್ತವೆ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಸಮ್ಮೇಳನ ಕನ್ನಡದ ಜನರನ್ನು ಸೇರಿಸುವ ಉತ್ಸವ. ಅದಕ್ಕೆ ಒಂದು ಸೊಬಗಿದೆ. ಆದರೆ ಸರಕಾರ, ರಾಜಕಾರಣ ಮೊದಲಾದ ಕಾರಣಗಳಿಂದ ಅನೇಕ ಬಾರಿ ಈ ಸಮ್ಮೇಳನ ಗೊಂದಲದ ಗೂಡಾಗುತ್ತದೆ. ಆದರೆ ಡಾ.ಮೋಹನ ಆಳ್ವರು ನಡೆಸುತ್ತಿರುವ ಆಳ್ವಾಸ್ ನುಡಿಸಿರಿಗೆ ಉತ್ಸವದ ಮೆರುಗಿನೊಂದಿಗೆ ಬೌದ್ಧಿಕ ಆಯಾಮ ಕೂಡ ಇದೆ. ಸಮ್ಮೇಳನಕ್ಕೆ ನಿಶ್ಚಿತ ಪರಿಕಲ್ಪನೆಯ ಚೌಕಟ್ಟು ಇದೆ. ಆಸಕ್ತರು ಮಾತ್ರ ಬರುತ್ತಾರೆ. ಸಮಯಪಾಲನೆ, ಅಚ್ಚುಕಟ್ಟುತನ, ವಿಶೇಷವಾಗಿ ಯುವಶಕ್ತಿ ಪ್ರೀತಿಯಿಂದ ಭಾಗವಹಿಸುತ್ತಾರೆ. ಈ ಕಾರಣದಿಂದಲೇ ನುಡಿಸಿರಿಗೆ ಸಾಹಿತ್ಯಲೋಕದಲ್ಲಿ ವಿಶಿಷ್ಟ ಗೌರವವಿದೆ.
 

ಕನ್ನಡದ ವರ್ತಮಾನ ಮತ್ತು ಭವಿಷ್ಯದ ಕುರಿತು?
ಕನ್ನಡ ಇಂದು ಮಾತಿನಲ್ಲಿ ಮಾತ್ರ ಉಳಿಯುವ ಸ್ಥಿತಿಯಿದೆ. ಕನ್ನಡವನ್ನು ವರ್ತಮಾನ ಮತ್ತು ಭವಿಷ್ಯದಲ್ಲಿ ಉಳಿಸುವ ಶಕ್ತಿಕೇಂದ್ರಗಳೆಂದರೆ ಶಾಲೆಗಳು. ಆದರೆ ಇಂದು ಕನ್ನಡ ಶಾಲೆಗಳು ಹಲವೆಡೆ ಮುಚ್ಚಲ್ಪಟ್ಟಿವೆ. ಇನ್ನು ಕೆಲವೆಡೆ ಕಷ್ಟದಲ್ಲಿ ಉಸಿರಾಡುತ್ತಿವೆ. ಆದ್ದರಿಂದ ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ದೊರೆಯುವಂತಾಗಬೇಕು. ಕನ್ನಡ ಮಾಧ್ಯಮವೇ ಬೇಕು. ಇಂಗ್ಲಿಷ್ ಒಂದು ಕಲಿಕೆಯ ಭಾಷೆಯಾಗಿರಲಿ, ಅಷ್ಟೇ.
ಇನ್ನು ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಏಕರೂಪದ ಸಿಲಬಸ್ ಇರಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಸರಕಾರಕ್ಕೆ ನಿಯಂತ್ರಣ ಇರಬೇಕು. ಖಾಸಗಿಯವರು ಮಾಡುವ ಭಾಷಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸರಕಾರ ಪ್ರೋತ್ಸಾಹಿಸಬೇಕು. ಆಗ ಭವಿಷ್ಯದಲ್ಲಿ ಕನ್ನಡ ಇನ್ನಷ್ಟು ಶಕ್ತಿಯುತವಾಗಬಲ್ಲುದು.

ಸಾಹಿತ್ಯದಲ್ಲಿ ಪಂಥೀಯ ಬದ್ಧತೆ ಎಷ್ಟು ಸರಿ?
ಯಾವ ಪ್ರಾಮಾಣಿಕ ಲೇಖಕನೂ ಒಂದು ಪಂಥಕ್ಕೆ ಬದ್ಧನಾಗಿ ಬರವಣಿಗೆಯನ್ನು ತೊಡಗುವುದಿಲ್ಲ. ಬದ್ಧತೆ ತಾನಾಗಿ ಬರುವುದು. ನಾನು ಮಹಿಳೆಯಾಗಿರುವುದರಿಂದ ಸಹಜವಾಗಿಯೇ ಮಹಿಳೆಯರ ಬದುಕಿನ ತಲ್ಲಣ, ಆತಂಕ, ಸಂತೋಷ ಎಲ್ಲವೂ ನನ್ನ ಬರವಣಿಗೆಯಲ್ಲಿ ಕಾಣಿಸುತ್ತೆ. ಹಾಗೆಂದು ನನ್ನನ್ನು ಮಹಿಳಾ ಸಾಹಿತಿ ಎಂದು ಗುರುತಿಸಬೇಕಿಲ್ಲ. ಸಾಹಿತ್ಯದಲ್ಲಿ ಪ್ರಭೇದ ಇಲ್ಲ. ಸಾಹಿತ್ಯ ಸಾಹಿತ್ಯವೇ. ಅಧ್ಯಯನ ಮಾಡುವವರು ಅವರ ಸೌಲಭ್ಯಕ್ಕಾಗಿ ಈ ರೀತಿ ವಿಂಗಡನೆ ಮಾಡುತ್ತಾರಷ್ಟೇ. ಎಡಪಂಥೀಯ, ಬಲಪಂಥೀಯ ಎಂಬ ಕಪ್ಪು ಬಿಳುಪು ನೆಲೆಯಿಂದ ಲೇಖಕನಾಗಲೀ ಓದುಗನಾಗಲೀ ಸಾಹಿತ್ಯವನ್ನು ಪರಿಭಾವಿಸುವುದು ಸರಿಯಲ್ಲ. ಕಾಲ ಸಾರ್ವಕಾಲಿಕ ಮೌಲ್ಯವುಳ್ಳದ್ದನ್ನು, ಮಾನವೀಯವಾದುದನ್ನು, ಸತ್ವಭರಿತವಾದುದನ್ನು ಮಾತ್ರ ಉಳಿಸಿಕೊಳ್ಳುತ್ತೆ ಅಷ್ಟೇ.

ಇವತ್ತಿನ ರಾಜಕೀಯದ ಬಗ್ಗೆ ಏನನ್ನಿಸುತ್ತೆ?
ಹೊಲಸಾಗಿದೆ. ನಮ್ಮ ರಾಜಕಾರಣಿಗಳಿಗೆ ಕುರ್ಚಿ, ಅಧಿಕಾರ, ಅವರ ವೇತನ ಹೆಚ್ಚಳ, ಸ್ವಂತ ಖರ್ಚು, ತಮ್ಮ ಪಾಕೆಟ್- ಇವು ಮಾತ್ರ ಕಾಣಿಸುತ್ತದೆ. ಅವರಿಗೆ ನೆರೆ ಸಂತ್ರಸ್ತರು, ರೈತರು, ಬಡವರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಕಾಣಿಸಲ್ಲ.ಪ್ರಜಾಪ್ರಭುತ್ವದಲ್ಲಿ ನಾವು ಒಡೆಯರು. ಆದರೆ ಪ್ರತೀ ಚುನಾವಣೆ ಮುಗಿದಾಗಲೂ ನಾವು ಸೇವಕರಂತೆ ಹೊಸ ನಿರೀಕ್ಷೆಯಲ್ಲಿ ಕಾಯುತ್ತೇವೆ. ಆದರೆ ಅವರಿಗೆ ಐಟಿ, ಬಿಟಿ, ನೈಸ್ ರಸ್ತೆ ಕಾಣುತ್ತದೆಯೇ ಹೊರತು ನಮ್ಮ ರಸ್ತೆಗಳ ಹೊಂಡ ಕಾಣಿಸುವುದಿಲ್ಲ. ಹಾಗೆ ನೋಡುವುದಿದ್ದರೆ ನಮ್ಮಲ್ಲಿ ಸರಕಾರ ಎಲ್ಲಿದೆ. ಅರಾಜಕತೆಯಿದೆ. ಜವಾಬ್ದಾರಿಹೀನ ಸರಕಾರಗಳೇ ಒಂದರ ಹಿಂದೆ ಒಂದು ಬರುತ್ತಿದೆ.

ಧಾರ್ಮಿಕ ಅಸಹನೆಯ ಬಗ್ಗೆ?
‘ತಾಳುವಿಕೆಗಿಂತ ಅನ್ಯ ತಪವು ಇಲ್ಲ’ ಎಂದು ನಂಬಿದ ಮನಸ್ಸು ಕನ್ನಡದ್ದು. ಅಹಿಂಸೆ, ಸಹನೆ, ಶಾಂತಿ- ಇದು ಗಾಂಧಿ ತೋರಿದ ದಾರಿ. ಇದು ಭಾರತೀಯ ದಾರಿ. ವ್ಯಕ್ತಿಗಳು ಒಬ್ಬೊಬ್ಬರಾಗಿರುವಾಗ ಇಂದೂ ಚೆನ್ನಾಗಿಯೇ ಇದೆ. ಗುಂಪಾಗುವಾಗ ಕೋಮುಭಾವನೆ ಹೆಚ್ಚಾಗುತ್ತಿದೆ. ಇದಕ್ಕೆ ಸಮಾಜದಲ್ಲಿ ಕಡಿಮೆಯಾಗುತ್ತಿರುವ ಮಾತೃತ್ವ ಶಕ್ತಿ ಕಾರಣ. ಮಾತೃತ್ವ ಎಂಬುದು ಹೆಣ್ಣಿಗೆ ಮಾತ್ರ ಅಲ್ಲ. ಎಲ್ಲ ಮನುಷ್ಯರ ಮನಸ್ಸಿನೊಳಗೂ ಅದು ಇದೆ. ಇರಬೇಕು. ಹಿಂದೆಲ್ಲಾ ಊರೊಳಗೆ ಮಕ್ಕಳ ಸಂಖ್ಯೆ ಹೆಚ್ಚಿರುತ್ತಿತ್ತು. ಎಲ್ಲಾ ಮಕ್ಕಳು ಒಟ್ಟು ಸೇರಿ ಆಡುತ್ತಿದ್ದರು. ಬೆಳೆಯುತ್ತಿದ್ದರು. ಮಕ್ಕಳು ಊರನ್ನು ಜಾತಿಮತ ಭೇದದಿಂದ ದೂರಮಾಡಿ ಸೌಹಾರ್ದದ ವಾತಾವರಣ ಸೃಷ್ಟಿಸುತ್ತಿದ್ದರು. ಬಹುಶಃ ಕೌಟುಂಬಿಕ ವ್ಯವಸ್ಥೆಯಲ್ಲಿ ಆಗುತ್ತಿರುವ ವಿಘಟನೆ ಸಾಮಾಜಿಕ ಅಸಹನೆಗೆ ಕಾರಣವಾಗುತ್ತಿದೆ ಅನ್ನಿಸುತ್ತದೆ.

ರಿಯಾಲಿಟಿ ಶೋಗಳ ಜನಪ್ರಿಯತೆ ಬಗ್ಗೆ ಏನನ್ನಿಸುತ್ತೆ?
ರಿಯಾಲಿಟೀ ಶೋಗಳ ಮೂಲಕ ದುಡ್ಡು ಮಾಡೋದಕ್ಕೆ ಹೊರಟಿರುವ ಕೆಲ ವಾಹಿನಿಗಳು ಮಕ್ಕಳನ್ನು, ಸ್ತ್ರೀಯರನ್ನು, ಭಾವನೆಗಳನ್ನು ಸರಕಾಗಿಸುತ್ತಿರುವ ಅಮಾನವೀಯತೆ ನಡೆಯುತ್ತಿದೆ. ಅವರ ತಾಳಕ್ಕೆ ತಕ್ಕಂತೆ ಹೆತ್ತವರೂ ಕುಣಿಯುತ್ತಿರುವುದು ಅಶ್ಚರ್ಯಕರ.

ನಿಮ್ಮ ಬರವಣಿಗೆಯ ಕುರಿತು?
ಮನುಷ್ಯರ ನಡುವೆ ಅಸಮಾನತೆ ಸೃಷ್ಟಿಸಿ ಹಿಂಸೆ, ಅವಜ್ಞೆ, ಅನಾದರ ತೋರುವ ವ್ಯವಸ್ಥೆಯ ವಿರುದ್ಧ ನನ್ನ ಹೋರಾಟ. ಅಂತಹ ಹೋರಾಟದಲ್ಲಿ ಬರವಣಿಗೆ ನನಗೆ ಶಕ್ತಿ ನೀಡಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT