ವಿಜಾಪುರ: `ಮಹಿಳಾ ಸ್ವಾತಂತ್ರ್ಯ ಎಂಬ ಪಾಶ್ಚಿಮಾತ್ಯ ಕೂಗಿನ ಹಿಂದೆ ಬಿದ್ದು ತಾಯಿಯಂದಿರು ಮಕ್ಕಳ ಪಾಲನೆ-ಪೋಷಣೆ ಮರೆಯಬಾರದು. ಒಂದೊಮ್ಮೆ ಮರೆತದ್ದೇ ಆದರೆ ಮುಂದೆ ದೇಶಕ್ಕೆ ಕೆಟ್ಟ ಕಾಲ ಬರುವ ಅಪಾಯವಿದೆ~ ಎಂದು ರಾಜ್ಯ ಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಹೇಳಿದರು.
ಇಲ್ಲಿಯ ಕೃಪಾಮಯಿ ಶಾರದಾ ಆಶ್ರಮ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನೋತ್ಸವ ವರ್ಷಾಚರಣೆ ಅಂಗವಾಗಿ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮಾತೃ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಮಕ್ಕಳನ್ನು ಸ್ವಾಭಿಮಾನಿಗಳನ್ನಾಗಿ ರೂಪಿಸುವ ಕೆಲಸವನ್ನು ಮಾತೆಯರು ಮಾಡಬೇಕು. ನಮ್ಮ ದೇಶದಲ್ಲಿ ಮಾತೃತ್ವ ಶಕ್ತಿ ನಾಡಿನ ಶಕ್ತಿಯಾಗಿ ರೂಪಗೊಳ್ಳಬೇಕು~ ಎಂದು ಅವರು ಹೇಳಿದರು. ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ.ಮೀನಾ ಚಂದಾವರಕರ, `ದೇಶವಾಸಿಗಳಲ್ಲಿಯ ಸೃಜನಶೀಲತೆ, ವೈಚಾರಿಕತೆ, ಸಾಮರ್ಥ್ಯ, ಚಾರಿತ್ರ್ಯ ಹಾಗೂ ಕಾರ್ಯಕ್ಷಮತೆಯೇ ದೇಶದ ಬಹುದೊಡ್ಡ ಆಸ್ತಿ. ಇದು ಹೆಚ್ಚಬೇಕಾದರೆ ತಾಯಿಯ ಪಾತ್ರ ಪ್ರಮುಖವಾದುದು~ ಎಂದು ಹೇಳಿದರು.
`ನಕಾರಾತ್ಮಕ ಭಾವನೆ ಎಂಬುದು ಮನುಷ್ಯನ ದೊಡ್ಡ ವೈರಸ್. ನಕಾರಾತ್ಮಕ ಭಾವನೆಯ ನಿವಾರಣೆಗೆ ಪ್ರಾರ್ಥನೆಯೊಂದೇ ಮದ್ದು. ಮಾತೆಯರು ತಮ್ಮ ಮಕ್ಕಳಲ್ಲಿ ಪ್ರಾರ್ಥನೆ ಮತ್ತು ಪ್ರಯತ್ನದ ಗುಣಗಳನ್ನು ಬೆಳೆಸಬೇಕು~ ಎಂದು ಕಿವಿಮಾತು ಹೇಳಿದರು.
ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ, ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಸ್ಥಳೀಯ ಕೃಪಾಮಯಿ ಶಾರದಾ ಆಶ್ರಮದ ಅಧ್ಯಕ್ಷೆ ಮಾತಾಜಿ ನಿರ್ಮಲಾ, ವಸುಂಧರಾ ಐನಾಪುರ ಇತರರು ವೇದಿಕೆಯಲ್ಲಿದ್ದರು.