ಲೂಧಿಯಾನ (ಪಿಟಿಐ): ಕೇಂದ್ರ ಸರ್ಕಾರವು ಮಾದಕ ದ್ರವ್ಯ ಪಿಡುಗನ್ನು ರಾಷ್ಟ್ರೀಯ ಸಮಸ್ಯೆ ಎಂದು ಪರಿಗಣಿಸಿ ಅದನ್ನು ಹತ್ತಿಕ್ಕಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿರುವ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಮಾದಕ ದ್ರವ್ಯಗಳ ಕಳ್ಳಸಾಗಣೆ ತಡೆಯುವುದಕ್ಕಾಗಿ ದೇಶದ ಗಡಿಗಳಲ್ಲಿ ಎರಡನೇ ರಕ್ಷಣಾ ಮಾರ್ಗ ಸ್ಥಾಪಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ರಾಜಸ್ತಾನದಲ್ಲಿ ಗಸೆಗಸೆ ಸಿಪ್ಪೆಯ ಮಾರಾಟದ ಮೇಲೆ ಕೇಂದ್ರ ಸರ್ಕಾರ ಕೂಡಲೇ ನಿಷೇಧ ಹೇರಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
ನಾಲ್ವರು ಮಕ್ಕಳು ನೀರು ಪಾಲು
ಬುರದ್ವಾನ್ /ಪಶ್ಚಿಮ ಬಂಗಾಳ (ಪಿಟಿಐ): ಭಾಗೀರಥಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಮೂವರು ಬಾಲಕಿಯರು ಸೇರಿದಂತೆ ನಾಲ್ವರು ಮಕ್ಕಳು ನೀರು ಪಾಲಾಗಿರುವ ಘಟನೆ ಬುರದ್ವಾನ್ ಜಿಲ್ಲೆಯ ಪುರಬಸ್ಥಾಲಿ ಪ್ರದೇಶದ ಭಾನುವಾರ ಸಂಭವಿಸಿದೆ.
ಇಲ್ಲಿನ ಭಾಗೀರಥಿ ನದಿಯ ಪಟುಲ ಸ್ನಾನಘಟ್ಟದಲ್ಲಿ ಮಕ್ಕಳು ಸ್ನಾನಕ್ಕೆ ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎಂ.ಎಚ್ ಮಿರ್ಜಾ ತಿಳಿಸಿದ್ದಾರೆ.
ಭಾರತ- ರಷ್ಯ ದ್ವಿಪಕ್ಷೀಯ ಮಾತುಕತೆ
ನವದೆಹಲಿ (ಐಎಎನ್ಎಸ್): ರಷ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ರಷ್ಯದ ಉಪಪ್ರಧಾನಿ ಡಿಮಿಟ್ರಿ ರೊಗೊಜಿನ್ ಮತ್ತು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಪೂರ್ವಭಾವಿ ಮಾತುಕತೆ ನಡೆಸಿ ಕೆಲವು ವಿಚಾರಳಲ್ಲಿ ಇರುವ ಭಿನ್ನಾಭಿಪ್ರಾಯ ಬಗೆಹರಿಸುವ ಪ್ರಯತ್ನ ಮಾಡಲಿದ್ದಾರೆ.
ನಾಗರಿಕ ಬಳಕೆಯ ಪರಮಾಣು ಹೊಣೆಗಾರಿಕೆ ಮತ್ತು ಉಭಯ ರಾಷ್ಟ್ರಗಳ ಮಧ್ಯೆ ವ್ಯಾಪಾರ ವೃದ್ಧಿ ಇವೇ ಮೊದಲಾದ ಅಂಶಗಳ ಬಗ್ಗೆ ರೊಗೊಜಿನ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೃಷ್ಣ ಅವರ ಜತೆ ಚರ್ಚಿಸಲಿದ್ದಾರೆ.
ಭಾರತ ಮತ್ತು ರಷ್ಯದ ಅಂತರ್ ಸರ್ಕಾರ ವ್ಯಾಪಾರ, ಆರ್ಥಿಕ, ವೈಜ್ಞಾನಿಕ, ತಾಂತ್ರಿಕ ಮತ್ತು ಸಾಂಸ್ಕೃತಿಕ ಅಯೋಗದ 18ನೇ ಸಮ್ಮೇಳನವು ಸೋಮವಾರ ನಡೆಯಲಿದೆ.
ರಿಲಯನ್ಸ್ಗೆ ಪ್ರಶಸ್ತಿ
ನವದೆಹಲಿ (ಪಿಟಿಐ): `ಉತ್ತಮ ಪರಿಸರ ನಿರ್ವಹಣೆ~ಗಾಗಿ ರಿಲಯನ್ಸ್ ಸಮೂಹದ ಜಾಮ್ನಗರ್ ರಿಫೈನರಿ ವಿಭಾಗಕ್ಕೆ ಬ್ರಿಟಿಷ್ ಸುರಕ್ಷತಾ ಮಂಡಳಿ `ಗ್ಲೋಬ್ಆಫ್ ಹಾನರ್~ ಪ್ರಶಸ್ತಿ ನೀಡಿ ಗೌರವಿಸಿದೆ.
ಲಂಡನ್ನ ಮ್ಯಾನ್ಸನ್ ಹೌಸ್ನಲ್ಲಿ ನ. 23ರಂದು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ ಎಂದು ರಿಲಯನ್ಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.