ಗೋಣಿಕೊಪ್ಪಲು: ಚೀನಿವಾಡ, ಬೇಗೂರು ಗ್ರಾಮದ ಮಾದೊಂಡು ಹೊಳೆಗೆ ರೂ. 8 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸೇತುವೆ ಕಾಮಗಾರಿಗೆ ವಿಧಾನಸಭಾ ಅಧ್ಯಕ್ಷ ಕೆ.ಜಿ.ಬೋಪಯ್ಯ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ರೂ. 2 ಕೋಟಿಗೂ ಹೆಚ್ಚು ಅನುದಾನ ಬಳಸಲಾಗಿದೆ. ರಸ್ತೆ, ಸೇತುವೆ, ತಡೆಗೋಡೆ, ಶಾಲಾ ಕಟ್ಟಡ ಮುಂತಾದ ಮುಖ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.
ಹುದಿಕೇರಿ ಬಿಜೆಪಿ ಸ್ಥಾನೀಯ ಸಮಿತಿ ಕಾರ್ಯದರ್ಶಿ ಮಂಡಚಂಡ ದಿನೇಶ್ ಚಿಟ್ಟಿಯಪ್ಪ ಮಾತನಾಡಿ ಚೀನಿವಾಡದಲ್ಲಿ ನಿರ್ಮಾಣವಾಗುತ್ತಿರವ ಸೇತುವೆಯಿಂದ ಹುದಿಕೇರಿ ಗ್ರಾಮಕ್ಕೆ ನೇರ ಸಂಪರ್ಕ ಲಭಿಸಲಿದೆ.
ಇದರಿಂದ ರೈತರ ಸರಕು ಸಾಗಣೆಗೆ ತುಂಬ ಸಹಕಾರಿಯಾಗಲಿದೆ. ಜೊತೆಗೆ ಹಳ್ಳಿಗಟ್ಟು ಸಿಐಟಿ ಕಾಲೇಜಿನ ದೂರವನ್ನು ಕಡಿಮೆಗೊಳಿಸಲಿದೆ ಎಂದು ಹೇಳಿದರು.
ಹುದಿಕೇರಿ ಭಾಗದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದ್ದು ಮುಂದಿನ ದಿನಗಳಲ್ಲಿ ಅವುಗಳ ಅಬಿವೃದ್ಧಿಗೆ ಗಮನ ಹರಿಸಬೇಕು ಎಂದು ಬೋಪಯ್ಯ ಅವರಲ್ಲಿ ಮನವಿ ಮಾಡಿದರು.
ತಾಲ್ಲೂಕು ಪಂಚಾಯಿತಿ ಸದಸ್ಯರಾದ ಅರುಣ್ ಭೀಮಯ್ಯ, ತೀತಿರ ಊರ್ಮಿಳಾ, ಆರ್ಎಂಸಿ ಪಾಧ್ಯಕ್ಷ ಸಸಿ ನಾಣಯ್ಯ, ಹುದಿಕೆರಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಅಳೆಮೇಂಗಡ ಮುದ್ದಪ್ಪ, ಉಪಾದ್ಯಕ್ಷೆ ಪ್ರಮಿಳಾ, ಸದಸ್ಯರಾದ ಸುರೇಶ್, ರಮೇಶ್, ಸವಿನ, ದಾದು ಪೂವಯ್ಯ, ರಘು ತಿಮ್ಮಯ್ಯ, ರಾಜಾ ಮುತ್ತಪ್ಪ, ಕೆ.ಎನ್. ಅಪ್ಪಣ್ಣ ಹಾಜರಿದ್ದರು.