ನವದೆಹಲಿ (ಪಿಟಿಐ): ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಇತ್ತೀಚಿನ ಕೃತಿ `ಟರ್ನಿಂಗ್ ಪಾಯಿಂಟ್ಸ್~ ಬಗ್ಗೆ ವರದಿ ಮಾಡುವಾಗ ಮಾಧ್ಯಮಗಳು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹೆಸರಿಗೆ ಕಳಂಕ ತಂದಿವೆ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಕಿಡಿಕಾರಿದ್ದಾರೆ.
`2002ರ ಗೋಧ್ರಾ ಗಲಭೆ ಬಳಿಕ ಕಲಾಂ ಅವರ ಗುಜರಾತ್ ಭೇಟಿಗೆ ಅಂದಿನ ಪ್ರಧಾನಿ ವಾಜಪೇಯಿ ತಡೆಯೊಡ್ಡಿದ್ದರು ಎಂಬ ಅರ್ಥದಲ್ಲಿ ಮಾಧ್ಯಮಗಳು ವರದಿ ಮಾಡಿರುವುದಕ್ಕೆ ಅಚ್ಚರಿಗೊಂಡೆ~ ಎಂದು ಅವರು ತಮ್ಮ ಬ್ಲಾಗ್ನಲ್ಲಿ ಬರೆದಿದ್ದಾರೆ.
`ಈ ಸಂದರ್ಭದಲ್ಲಿ ಗುಜರಾತ್ಗೆ ತೆರಳುವ ಅಗತ್ಯವಿದೆಯೇ?~ ಎಂದು ವಾಜಪೇಯಿ ತುಂಬ ಸಹಜವಾಗಿಯೇ ಕಲಾಂ ಬಳಿ ಕೇಳಿದ್ದನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ~ ಎಂದು ಅಡ್ವಾಣಿ ಆಕ್ಷೇಪಿಸಿದ್ದಾರೆ.`ದೇಶದ ರಾಜಕೀಯ ಇತಿಹಾಸದಲ್ಲಿ ಮೋದಿ ವಿರುದ್ಧ ನಡೆದಷ್ಟು ಅಪಪ್ರಚಾರ ಯಾವ ನಾಯಕನ ವಿರುದ್ಧವೂ ನಡೆದಿಲ್ಲ ಎಂದು ನನಗೆ ಆಗಾಗ ಅನ್ನಿಸುತ್ತದೆ~ ಎಂದೂ ಅವರು ಹೇಳಿದ್ದಾರೆ.
ಕಲಾಂ ತಮ್ಮ ಕೃತಿಯಲ್ಲಿ ಮೋದಿ ಅವರನ್ನು ಹೊಗಳಿದ್ದಾರೆ. ಆದರೆ ಯಾವ ಪತ್ರಕರ್ತರೂ ಇದನ್ನು ವರದಿ ಮಾಡಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.ಭಾರತ-ಪಾಕ್ ಸಂಬಂಧ ಸುಧಾರಣೆ ಬಗ್ಗೆಯೂ ತಮ್ಮ ಬ್ಲಾಗ್ನಲ್ಲಿ ಪ್ರಸ್ತಾಪಿಸಿರುವ ಅಡ್ವಾಣಿ, `ಭೂಗತ ಪಾತಕಿ ದಾವೂದ್ ಇಬ್ರಾಹಿಂನಂಥ ಉಗ್ರರಿಗೆ ಆಶ್ರಯ ನೀಡುವುದನ್ನು ನಿಲ್ಲಿಸದ ಹೊರತೂ ಉಭಯ ದೇಶಗಳ ಸಂಬಂಧ ಸುಧಾರಿಸುವುದಿಲ್ಲ~ ಎಂದು ಹೇಳಿದ್ದಾರೆ.