ಚೆನ್ನೈ (ಪಿಟಿಐ): ಕೂಡುಂಕುಳಂ ಪರಮಾಣು ವಿದ್ಯುತ್ ಯೋಜನೆ ವಿರೋಧಿ ಚಳವಳಿ ನೇತೃತ್ವ ವಹಿಸಿರುವ ಎಸ್. ಪಿ. ಉದಯ್ಕುಮಾರ್ ಅವರು ಪ್ರಧಾನಿ ಕಾರ್ಯಾಲಯದ ರಾಜ್ಯ ಸಚಿವ ವಿ. ನಾರಾಯಣಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬೆದರಿಕೆ ಹಾಕಿದ್ದಾರೆ.
ವಿದೇಶಿ ಮೂಲಗಳಿಂದ ತಾವು 1.5 ಕೋಟಿ ರೂಪಾಯಿ ಪಡೆದು ಪರಮಾಣು ಸ್ಥಾವರದ ವಿರುದ್ಧ ಚಳವಳಿ ನಡೆಸುತ್ತಿರುವುದಾಗಿ ನಾರಾಯಣಸ್ವಾಮಿ ಆಪಾದಿಸಿದ್ದು, ಕೆಲವರು ಈ ಆಪಾದನೆಯನ್ನು ನಿಜವೆಂದು ಭಾವಿಸಿರುವುದರಿಂದ ಮಾನನಷ್ಟ ಮೊಕದ್ದಮೆ ಹೂಡುವುದು ಅನಿವಾರ್ಯ ಎಂದು ಉದಯ್ಕುಮಾರ್ ತಿಳಿಸಿದ್ದಾರೆ.
ಯಾವಾಗ, ಎಲ್ಲಿ ಮತ್ತು ಯಾರಿಂದ ಹಣ ಪಡೆದಿದ್ದೇನೆ ಹಾಗೂ ಯಾವ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ ಎಂಬುದನ್ನು ಸಚಿವರು ವಿವರಿಸಬೇಕು ಎಂದು ತಿಳಿಸಿರುವ ಅವರು, ಇನ್ನೆರಡು ದಿನಗಳಲ್ಲಿ ತಾವು ಮಾನನಷ್ಟ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ.