ನವದೆಹಲಿ (ಪಿಟಿಐ): `ಟಿವಿ ಟುಡೆ~ ಸಮೂಹ ಮತ್ತು ಇತರ 13 ಟಿವಿ ವಾಹಿನಿಗಳ ವಿರುದ್ಧ ಕೇಂದ್ರದ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಪತ್ನಿ ಲೂಯಿ ಖುರ್ಷಿದ್ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಉತ್ತರ ಸಲ್ಲಿಸುವಂತೆ ದೆಹಲಿ ಹೈಕೋರ್ಟ್ ವಾಹಿನಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಖುರ್ಷಿದ್ ಹಾಗೂ ಅವರ ಪತ್ನಿ ಲೂಯಿ ಅವರ ಟ್ರಸ್ಟ್ನಲ್ಲಿ ಅವ್ಯವಹಾರವಾಗಿದೆ ಎಂಬ ಆರೋಪ ಪ್ರಸಾರ ಮಾಡಿರುವ ಟಿವಿ ವಾಹಿನಿಗಳ ವಿರುದ್ಧ ಖುರ್ಷಿದ್ ಪತ್ನಿ ಲೂಯಿ ದೆಹಲಿ ಹೈಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ಹೂಡ್ದ್ದಿದಾರೆ.
ಅವರು ಮಾಧ್ಯಮಗಳಿಂದ ತಮಗೆ ಆಗಿರುವ ಮಾನಹಾನಿಗೆ ಒಂದು ಕೋಟಿ ರೂಪಾಯಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಎತ್ತಿಕೊಂಡ ನ್ಯಾಯಮೂರ್ತಿ ವಾಲ್ಮಿಕಿ ಜೆ. ಮೆಹ್ತಾ ಅವರು ಎಲ್ಲಾ ಪ್ರತಿವಾದಿಗಳಿಗೆ ಸಮನ್ಸ್ ಜಾರಿ ಮಾಡಿದ್ದು, ಉತ್ತರ ನೀಡಲು ನಾಲ್ಕು ವಾರಗಳ ಕಾಲಾವಕಾಶ ನೀಡಿದ್ದಾರೆ.