ಶಿಕಾರಿಪುರ: ಗ್ರಾಮೀಣ ಪ್ರದೇಶದಲ್ಲಿನ ಮಾನವ ಸಂಪನ್ಮೂಲದ ಸಮರ್ಪಕ ಸದ್ಬಳಕೆ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ನಬಾರ್ಡ್ ಉಪ ಮಹಾ ಪ್ರಬಂಧಕ ಎ.ಸಿ. ಬಲ್ಲಾಳ್ ಹೇಳಿದರು.
ತಾಲ್ಲೂಕಿನ ಸುರಗೀಹಳ್ಳಿಯಲ್ಲಿ ಇತ್ತೀಚೆಗೆ ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ನಡೆದ ‘ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಮಾನವ ಸಂಪನ್ಮೂಲ ಲಭ್ಯವಿದ್ದು, ಅವರಿಗೆ ಹಲವು ಗುಣಮಟ್ಟದ ತರಬೇತಿ ನೀಡುವ ಮೂಲಕ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಅಗತ್ಯವಿರುವ ಸೂಕ್ತಕ್ರಮ ಕೈಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸದಸ್ಯ ಬಿ.ಎಸ್. ತಿಮ್ಮೋಲಿ ಮಾತನಾಡಿ, ನಮ್ಮಲ್ಲಿ ಹೆಚ್ಚಾಗಿರುವ ಸಂಪನ್ಮೂಲವನ್ನು ಆವಶ್ಯವಿರುವ ಜನರಿಗೆ ನೀಡುವುದೇ ಸಮಾಜ ಸೇವೆಯಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿರುವ ನಬಾರ್ಡ್ ಸಂಸ್ಥೆ ಸುರಗೀಹಳ್ಳಿಯ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುತ್ತಿರುವ ಕಾರ್ಯ ಶ್ಲಾಘನೀಯವಾದದ್ದು ಎಂದರು.
ಕೊಕ್ಕೊ ಪಂದ್ಯಾವಳಿಯಲ್ಲಿ ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಹೆಸರು ಮಾಡಿರುವಂತಹ ಪ್ರತಿಭಾವಂತ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಣೆ ಮಾಡಲಾಯಿತು.
ಕೆ.ಸಿ. ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ನಬಾರ್ಡ್ನ ಎ.ಎಸ್. ರಾಘವೇಂದ್ರ, ಗುಡ್ಡದತುಮ್ಮಿನಕಟ್ಟೆ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯರಾದ ರೂಪಾ ಜಗದೀಶ್, ಮಂಜುನಾಥ್, ರೈತ ಕೂಟದ ಮಲ್ಲೇಶಪ್ಪ, ಶಾಲಾ ಮುಖ್ಯಸ್ಥರಾದ ಚಿಕ್ಕಪ್ಪ, ಎನ್. ಬಸವರಾಜಪ್ಪ ಮಾತನಾಡಿದರು.