ನ್ಯೂಯಾರ್ಕ್ (ಪಿಟಿಐ): ವಿವಾದಾತ್ಮಕ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ರದ್ದುಪಡಿಸಲು ವಿಫಲವಾಗಿರುವ ಭಾರತ ಸರ್ಕಾರದ ಕ್ರಮವನ್ನು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾವಲು ಸಂಸ್ಥೆಯು ಟೀಕಿಸಿದೆ.
ಸಿರಿಯಾದಲ್ಲಿ ಸತತವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿ ಹತ್ಯೆಗಳು ನಡೆಯುತ್ತಿದ್ದರೂ ಭಾರತ ಸರ್ಕಾರ ಖಂಡಿಸದೆ ಮೌನ ವಹಿಸರುವ ಬಗ್ಗೆಯೂ ಸಂಸ್ಥೆಯ 2012ನೇ ಸಾಲಿನ ವಾರ್ಷಿಕ ವರದಿಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.
2011ರಲ್ಲಿ ಭಾರತದಲ್ಲಿ ಲಾಕಪ್ ಸಾವು, ಪೊಲೀಸ್ ದೌರ್ಜನ್ಯ, ದುರ್ಬಲರ ರಕ್ಷಣೆಯಲ್ಲಿ ಪೊಲೀಸ್ ವೈಫಲ್ಯದಂತಹ ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆದಿರುವುದು ವಿಷಾದಕರ ಸಂಗತಿ ಎಂದು ವರದಿಯಲ್ಲಿ ತಿಳಿಸಲಾಗಿದೆ.
ದೌರ್ಜನ್ಯ ಎಸಗಿದ ಸೈನಿಕರು ಮತ್ತು ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳುವಲ್ಲಿ ಭಾರತ ವಿಫಲವಾಗಿದೆ ಹಾಗೂ ಪೊಲೀಸ್ ವ್ಯವಸ್ಥೆ ಸುಧಾರಣೆಗೆ ಅಗತ್ಯ ಕ್ರಮ ತೆಗೆದುಕೊಂಡಿಲ್ಲ ಎಂದು ಸಂಸ್ಥೆಯ ಏಷ್ಯಾ ವಿಭಾಗದ ನಿರ್ದೇಶಕ ಬ್ರಾಡ್ ಅಡಮ್ ತಿಳಿಸಿದ್ದಾರೆ.