ಧಾರವಾಡ: ರಾಷ್ಟ್ರದಲ್ಲಿ ಸುಖ-ಶಾಂತಿ, ಅಭಿವೃದ್ಧಿಗಾಗಿ ಮಾನವ ಹಕ್ಕುಗಳು ಅವಶ್ಯಕವಾಗಿದ್ದು, ಭಾರತ ಈ ಹಕ್ಕುಗಳ ಸಂರಕ್ಷಕ ದೇಶವಾಗಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಮಾನವ ಹಕ್ಕುಗಳು ಪ್ರಯೋಜನ ಕಾರಿಯಾಗಿವೆ ಎಂದು ಪುದುಚೇರಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ವಿ.ಟಿ. ಪಾಟೀಲ ಹೇಳಿದರು.
ಇಲ್ಲಿನ ಜೆಎಸ್ಎಸ್ ಕಾಲೇಜಿನ ಮಾನವ ಹಕ್ಕುಗಳ ಸಂಘವು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಭಯೋತ್ಪಾದನೆ ಮಾನವ ಹಕ್ಕುಗಳಿಗೆ ಅಪಾಯಕಾರಿಯಾಗಿದ್ದು, ವಿದ್ಯಾರ್ಥಿಗಳು ಮಾನವ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು ಎಂದರು.
ಪ್ರಾಚಾರ್ಯ ಡಾ.ಅಜಿತ ಪ್ರಸಾದ ಅಧ್ಯಕ್ಷತೆ ವಹಿಸಿದ್ದರು. ಪ್ರಾಚೀನ ಕಾಲದಿಂದಲೂ ಮಾನವ ಹಕ್ಕುಗಳ ಸಂರಕ್ಷಣೆ ನಡೆಯುತ್ತಿರುವುದು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಋಗ್ವೇದದಲ್ಲಿ ಲಿಂಗಸಮಾನತೆ, ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಮಾನವ ಹಕ್ಕುಗಳ ರಕ್ಷಣೆ ರಾಜನ ಕರ್ತವ್ಯಗಳಾಗಿದ್ದವು ಎಂದು ಹೇಳಲಾಗಿದೆ. ಈ ನಾಡಿನ ಸಂತರು ಕೂಡ ಮಾನವ ಹಕ್ಕುಗಳನ್ನು ಎತ್ತಿ ಹಿಡಿದಿದ್ದಾರೆ ಎಂದರು.
ಪ್ರೊ. ಆರ್.ವಿ. ಚಿಟಗುಪ್ಪಿ, ಸೂರಜ್ ಜೈನ್, ಎನ್.ಜಿ. ಹೊಳೆಯಣ್ಣವರ, ಚನ್ನಮ್ಮ ಶಾನಭಾಗ, ಸುರೇಶ ಕುಲಕರ್ಣಿ ವೇದಿಕೆಯಲ್ಲಿದ್ದರು.