ಬೆಂಗಳೂರು: `ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಲು ಸಾಧ್ಯ' ಎಂದು ಶಿಕ್ಷಣತಜ್ಞ ಡಾ.ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟರು.
ಕೃಷಿ ತಂತ್ರಜ್ಞರ ಸಂಸ್ಥೆಯು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 44ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಪ್ರಸ್ತುತ ದಿನಗಳಲ್ಲಿ ಮೌಲ್ಯಗಳು ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ಆದರೆ ಎಲ್ಲ ಕಾಲಘಟ್ಟದಲ್ಲೂ ಇಂತಹದ್ದೊಂದು ಆತಂಕವಿತ್ತು. ಹಿರಿಯರು ಕೇವಲ ಮೌಲ್ಯಗಳ ಬಗ್ಗೆ ಭಾಷಣ ಬಿಗಿಯದೇ ಅದನ್ನು ಸ್ವತಃ ಅಳವಡಿಸಿಕೊಳ್ಳುವತ್ತ ಚಿಂತನೆ ನಡೆಸಬೇಕು' ಎಂದರು.
`ಪ್ರಾಮಾಣಿಕರಾಗಿ ಜೀವನ ನಡೆಸಿದಾಗ ಮಾತ್ರ ಜೀವನದ ಅಂತಃಸತ್ವವನ್ನು ಹೆಚ್ಚಿಸಬಹುದು. ಈ ದಿಸೆಯಲ್ಲಿ ಓದು ಮತ್ತು ಜ್ಞಾನವಿರಬೇಕು' ಎಂದು ಸಲಹೆ ನೀಡಿದರು.
ಹಿರಿಯ ಕೃಷಿ ತಂತ್ರಜ್ಞ ಗುರುರಾಜ ಹುಣಸಗಿ, `ಕೃಷಿಕರು ಅತ್ಯುನ್ನತ ತಂತ್ರಜ್ಞಾನವನ್ನು ಬಳಸಿಕೊಂಡು ಹೆಚ್ಚಿನ ಇಳುವರಿಯನ್ನು ಪಡೆಯಬಹುದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಕೃಷಿ ತಂತ್ರಜ್ಞರ ಸೇವೆಯನ್ನು ಪರಿಗಣಿಸಿ ಗೌರವ ನೀಡುತ್ತಿರುವುದಕ್ಕೆ ಸಂತಸವಾಗಿದೆ' ಎಂದು ಹೇಳಿದರು. ಕೃಷಿ ತಂತ್ರಜ್ಞರಿಗೆ ಸನ್ಮಾನ ಮಾಡಲಾಯಿತು. ಸಂಸ್ಥೆಯ ಡಾ.ಡಿ.ರಾಜಗೋಪಾಲ, ಕೆ.ಕೃಷ್ಣಪ್ಪ ಇತರರು ಉಪಸ್ಥಿತರಿದ್ದರು.