ದಾವಣಗೆರೆ: ಯಾವುದೇ ಕಲಿಕೆಗೂ ಮೊದಲು ಎಲ್ಲರೂ ಮಾನವೀಯತೆ ಉಳಿಸಿಕೊಳ್ಳುವ ಶಿಕ್ಷಣ ಪಡೆಯಬೇಕು ಎಂದು ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿವೃತ್ತ ವಿಜ್ಞಾನಿ ಡಾ.ಇ. ರತಿರಾವ್ ಹೇಳಿದರು.
ನಗರದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ ರೋಟರಿ ಬಾಲಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಶಿಕ್ಷಣವನ್ನು ಕುರಿತ ‘ವಿದ್ಯಾರ್ಥಿ ವಿಧಾನಸೌಧ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ಮುಖಂಡ ಪ್ರಕಾಶ್ ಮಾತನಾಡಿ, ವಿದೇಶಿ ಶೈಕ್ಷಣಿಕ ಸಂಸ್ಥೆಗಳ ಮಸೂದೆ-2010, ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಕಾನೂನು ಬಾಹಿರ ಚಟುವಟಿಕೆ ನಿಷೇಧ, ವೈದ್ಯಕೀಯ ಶಿಕ್ಷಣ ಮತ್ತು ವಿಶ್ವವಿದ್ಯಾಲಯಗಳ ಮಸೂದೆ -2010 ಶಿಕ್ಷಣ ನ್ಯಾಯ ಮಂಡಳಿ ಮಸೂದೆ-2010 ಇವೆಲ್ಲವೂ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ವಿದೇಶಿ ಶಕ್ತಿಗಳ ಕೈಗೆ ನೀಡುವ ವ್ಯವಸ್ಥಿತ ಹುನ್ನಾರವಾಗಿದೆ ಎಂದರು.
ಕೇಂದ್ರ ಸರ್ಕಾರದ 2ಜಿ ಸ್ಪೆಕ್ಟ್ರಂ ಹಗರಣ, ಕಾಮನ್ವೆಲ್ತ್ ಕ್ರೀಡಾಕೂಟದ ಹಗರಣಗಳು ನಮ್ಮನ್ನಾಳುವ ಮಂದಿಯ ಮೇಲೆ ಜುಗುಪ್ಸೆ ಮೂಡಿಸಿವೆ. ಒಟ್ಟಿನಲ್ಲಿ ಶಿಕ್ಷಣವು ಉಳ್ಳವರಿಗೆ ಮಾತ್ರ ಲಭ್ಯವಾಗುತ್ತದೆ. ಬಹುರಾಷ್ಟ್ರೀಯ ಕಂಪೆನಿಗಳು ಶಿಕ್ಷಣ ಕ್ಷೆತ್ರಕ್ಕೆ ಇಳಿದರೆ ಜನಸಾಮಾನ್ಯರ ಗತಿಯೇನು ಎಂದು ಪ್ರಶ್ನಿಸಿದರು.