ನೆಲಮಂಗಲ: `ಮನುಷ್ಯ ಶಾರೀರಿಕವಾಗಿ ಸ್ವಸ್ಥವಾಗಿದ್ದು, ಮಾನಸಿಕವಾಗಿ ಅಸ್ವಸ್ಥನಾದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಮನುಷ್ಯ ಪೂರ್ಣವಾಗಿ ಸ್ವಸ್ಥನಾಗಿರಬೇಕಾದರೆ ದೈಹಿಕ ಮತ್ತು ಮಾನಸಿಕ ಸ್ಥಿತಿಗಳೆರಡೂ ಉತ್ತಮವಾಗಿರಬೇಕು' ಎಂದು ವಾಯುಸೇನೆಯ ನಿವೃತ್ತ ಅಧಿಕಾರಿ ಪಾರ್ಥಸಾರಥಿ ಕೆ. ಅಯ್ಯರ್ ಅಭಿಪ್ರಾಯಪಟ್ಟರು.
ಸ್ಥಳೀಯ `ಯೂರೊಕಿಡ್ಸ್' ಸಂಸ್ಥೆಯು ಈಚೆಗೆ ಪಟ್ಟಣದಲ್ಲಿ ಏರ್ಪಡಿಸಿದ್ದ `ಆರೋಗ್ಯವೇ ಭಾಗ್ಯ' ವಾರ್ಷಿಕ ಕ್ರೀಡಾಕೂಟ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಹರ್ಷ ಸಮೂಹ ಸಂಸ್ಥೆಯ ಅಧ್ಯಕ್ಷ ಎಸ್.ಶಿವಕುಮಾರ್ ರಾಜ್ಯ ಮಟ್ಟದ, ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ನೀಡಿದರು. ಯೂರೊಕಿಡ್ಸ್ ಮುಖ್ಯಸ್ಥೆ ಗಿರಿಜಾ ವಿದ್ಯಾರ್ಥಿಗಳಿಗೆ ಸಸಿ ವಿತರಿಸಿದರು.
ಏಕಾಗ್ರತೆಯಿಂದ ಅಧ್ಯಯನ: ಸಲಹೆ
ಸೂಲಿಬೆಲೆ: `ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನದಲ್ಲಿ ತೊಡಗಬೇಕು. ಸಂಸ್ಕಾರ ಮನೆಯಿಂದಲೇ ಆರಂಭವಾಗಬೇಕು' ಎಂದು ಧಾರವಾಡದ ವಿಜಯಾನಂದ ಸರಸ್ವತಿ ಸ್ವಾಮೀಜಿ ಸಲಹೆ ನೀಡಿದರು.
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು, ಎನ್ಎಸ್ಎಸ್ ಹಾಗೂ ಇಕೋ ಕ್ಲಬ್ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಉಪನ್ಯಾಸ ನೀಡಿದರು. ಪ್ರಾಂಶುಪಾಲ ಚಂದ್ರಶೇಖರ್, ಉಪನ್ಯಾಸಕರಾದ ಕೆ.ಹನುಮಂತರಾಯಪ್ಪ, ಶಿಕ್ಷಣತಜ್ಞ ಡಿ.ಎಸ್.ಶೇಠ್, ಲಕ್ಷ್ಮೀ ಭಟ್, ಗಂಗಾಂಬಿಕಾ ಮತ್ತಿತರಿದ್ದರು.