ತಿಪಟೂರು: ಮಾನಸಿಕವಾಗಿ ಅಸ್ವಸ್ಥ ರಾದವರಿಗೆ ವಿಶೇಷ ಕಾನೂನು ನೆರವು ಹಾಗೂ ಉಚಿತ ಚಿಕಿತ್ಸಾ ಸೌಲಭ್ಯ ಲಭ್ಯವಿದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಕೆ.ಎಂ.ರಾಜ ಶೇಖರ್ ತಿಳಿಸಿದರು.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿಯಿಂದ ಸೋಮವಾರ ನಡೆದ ವಿಶ್ವ
ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ಕಾನೂನು ಅರಿವು ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮಾನಸಿಕ ಅಸ್ವಸ್ಥರನ್ನು ತಿರಸ್ಕಾರದಿಂದ ನೋಡದೆ ಮಾನವೀಯ ನೆಲೆಯಲ್ಲಿ ಕಾಣಬೇಕು. ಅವರ ಬಗ್ಗೆ ಕಾಳಜಿ ವಹಿಸಿ ಗೌರವದ ಬದುಕು ಸಾಧ್ಯವಾಗಿಸಬೇಕು. ಅವರಿಗಿರುವ ಸೌಲಭ್ಯ ಸದ್ಬಳಕೆಗೆ ಸಂಬಂಧಿಗಳು ಮುಂದೆ ಬರಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಆರ್.ಪಿ.ಗೌಡ ಮಾತನಾಡಿ, ಮಾನಸಿಕ ಅಸ್ವಸ್ಥರ ಬಗ್ಗೆ ಸಮಾಜದಲ್ಲಿ ಉತ್ತಮ ಮನಸ್ಥಿತಿ ರೂಪಿಸುವುದು ಈ ದಿನಾಚರಣೆ ಉದ್ದೇಶ. ಮಾನಸಿಕ ಅಸ್ವಸ್ಥರ ಬಗ್ಗೆ ಅಮಾನವೀಯವಾಗಿ ನಡೆಸಿಕೊಳ್ಳುವುದು ಪ್ರಜ್ಞಾವಂತ ಸಮಾಜದ ಲಕ್ಷಣವಲ್ಲ ಎಂದರು.
ತಜ್ಞ ವೈದ್ಯ ಚನ್ನಬಸಪ್ಪ ಉಪನ್ಯಾಸ ನೀಡಿ, ಮಾನಸಿಕ ಅಸ್ವಸ್ಥತೆ ನಿವಾರಿಸಲು ಸಾಧ್ಯವಾದ ಮಾರ್ಗಗಳ ಬಗ್ಗೆ ತಿಳಿವಳಿಕೆ ಪಡೆಯಬೇಕು. ಅನುವಂಶಿಕ ಮತ್ತು ಆಘಾತ ರೋಗ ಸಂದರ್ಭ ಅರಿತು ನಿವಾರಣೆ ಕ್ರಮ ಅನುಸರಿಸಬೇಕು ಎಂದರು.
ಆಡಳಿತ ವೈದ್ಯಾಧಿಕಾರಿ ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ವೈದ್ಯ ಸುರೇಶ್, ವಕೀಲರ ಸಂಘದ ಅಧ್ಯಕ್ಷ ದೇವಪ್ರಸಾದ್, ಹಿರಿಯ ವಕೀಲ ಸೋಮಸುಂದರ್, ಡಾ.ಪ್ರಹ್ಲಾದ್ ಮತ್ತಿತರರು ಇದ್ದರು.
ವಕೀಲೆ ಶೋಭಾದೇವಿ ನಿರೂಪಿಸಿ, ಸರ್ಕಾರಿ ಸಹಾಯಕ ಅಭಿಯೋಜಕ ನಿರಂಜನಮೂರ್ತಿ ಸ್ವಾಗತಿಸಿ, ವಕೀಲ ಉಮೇಶ್ ವಂದಿಸಿದರು.