ಅರಸೀಕೆರೆ: ಮಾನಸಿಕ ಒತ್ತಡ, ಆತಂಕ ಹಾಗೂ ಗೊಂದಲಗಳ ನಿವಾರಣೆಯನ್ನು ಧ್ಯಾನದಿಂದ ಪರಿಹರಿಸಿಕೊಳ್ಳಲು ಸಾಧ್ಯ ಎಂದು ಮೈಸೂರು ಓಶೋ ಸನ್ನಿಧಿಯ ಮುಖ್ಯಸ್ಥ ಡಾ. ಚಂದ್ರಶೇಖರ ಹಂಜಿ ಭಾನುವಾರ ತಿಳಿಸಿದರು.
ಪಟ್ಟಣದ ಹೊರ ಭಾಗದಲ್ಲಿರುವ ಕೆಪಿಎಸ್ ಪಿರಮಿಡ್ ಧ್ಯಾನ ಕೇಂದ್ರದ ವತಿಯಿಂದ ಆಯೋಜಿಸಿದ್ದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹೃದ್ರೋಗ, ರಕ್ತದೊತ್ತಡ, ಮಾನಸಿಕ ಖಿನ್ನತೆಯಿಂದ ಬಳಲುವ ವ್ಯಕ್ತಿಗಳಿಗೆ ಧ್ಯಾನ ಅಮೃತ ಸಿಂಚನವಾಗಲಿದೆ ಎಂದು ಹೇಳಿದರು.
ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಕೆ.ಪಿ.ಎಸ್. ವಿಶ್ವನಾಥ್, ಪತ್ರಕರ್ತ ಬಿ.ಎಸ್. ಸೇತೂರಾಂ, ಪಿರಮಿಡ್ ಧ್ಯಾನ ಕೇಂದ್ರದ ಮುಖ್ಯಸ್ಥ ಎಂ.ವಿ. ಶೇಷಾಚಲ, ಪ್ರಸನ್ನಕುಮಾರ್ ಮಂಜುನಾಥ್ ಇದ್ದರು.
ರೋಟರಿ ಸಂಸ್ಥೆಯ ವತಿಯಿಂದ ಮಾಜಿ ಅಧ್ಯಕ್ಷ ಎನ್.ಜಿ. ಮಧು ನೇತೃತ್ವದಲ್ಲಿ ಉಚಿತ ರಕ್ತ ಪರೀಕ್ಷೆ ಹಾಗೂ ರಕ್ತದಾನ ಶಿಬಿರ ಸಹ ನಡೆಯಿತು.
ವೈಭವದ ಕಾರ್ತಿಕ ಪೂಜೆ: ಪಟ್ಟಣದ ಗ್ರಾಮ ದೇವತೆಗಳಾದ ಕರಿಯಮ್ಮ ಮತ್ತು ಮಲಿಗೆಮ್ಮ ದೇವಿ ಅವರ ದೇವಾಲಯದಲ್ಲಿ ಕಡೇ ಕಾರ್ತಿಕ ಮಾಸದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.