ಬೆಂಗಳೂರು: `ಭೌಗೋಳಿಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ಜತೆಗೆ ಮನುಷ್ಯರ ಮಾನಸಿಕ ಪರಿಸರವನ್ನು ಶುದ್ಧಿಗೊಳಿಸುವ ಕಾರ್ಯಕ್ಕೂ ಒತ್ತು ನೀಡಬೇಕಿದೆ~ ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಚಿಲ್ಡ್ರನ್ಸ್ ಇಂಡಿಯಾ ಸಂಸ್ಥೆಯು 7ನೇ ಅಂತರರಾಷ್ಟ್ರೀಯ ಮಕ್ಕಳ ಚಿತ್ರೋತ್ಸವದ ಹಿನ್ನೆಲೆಯಲ್ಲಿ ಸುಚಿತ್ರಾ ಫಿಲಂ ಸೊಸೈಟಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪರಿಸರ ಚಿತ್ರಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
`ಜನರ ಚಿಂತನೆ ಹಾಳಾಗುತ್ತಿರುವ ಈ ಸಂದರ್ಭದಲ್ಲಿ ಅವರ ಮಾನಸಿಕ ಪರಿಸರವನ್ನು ಉತ್ಕೃಷ್ಟಗೊಳಿಸಬೇಕಿದೆ. ಭವಿಷ್ಯದ ಪ್ರಜೆಗಳಾದ ಮಕ್ಕಳಿಗೆ ಚಿಕ್ಕಂದಿನಿಂದಲೇ ಉತ್ತಮ ವಿಚಾರಗಳನ್ನು ತಿಳಿಸಬೇಕು. ಹಾಗೆಯೇ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಪರಿಸರ ಸಂಬಂಧಿ ಚಿತ್ರ ಪ್ರದರ್ಶನ ಏರ್ಪಡಿಸಿರುವುದು ಉತ್ತಮವಾಗಿದೆ~ ಎಂದರು.
`ಸ್ಟಂಟ್, ಗಿಮಿಕ್ಗಳ ಮೂಲಕ ಕಟ್ಟಡಗಳನ್ನು ಕೆಡವುವ, ಸ್ಫೋಟಿಸುವ ದೃಶ್ಯಗಳಿಂದ ರೋಚಕತೆ ಉಂಟು ಮಾಡುವ ಚಿತ್ರಗಳು ಎಂದಿಗೂ ಉತ್ತಮ ಚಿತ್ರಗಳೆನಿಸಿಕೊಳ್ಳುವುದಿಲ್ಲ. ಹಾಗಾಗಿ ವಿಧ್ವಂಸಕ ಮನೋವೃತ್ತಿಯ ಬದಲಿಗೆ ಸಂಸ್ಕೃತಿ ಕಟ್ಟುವ ಚಿತ್ರಗಳಿಗೆ ಆದ್ಯತೆ ನೀಡಬೇಕು~ ಎಂದು ಹೇಳಿದರು.
ಚಿತ್ರ ನಿರ್ದೇಶಕ ಕೆ.ಎಸ್. ಭಗವಾನ್, `ಸಮಾಜದ ಮೇಲೆ ಚಲನಚಿತ್ರರಂಗವು ಗಂಭೀರ ಪರಿಣಾಮ ಬೀರುವುದರಿಂದ ನಿರ್ದೇಶಕರು, ನಿರ್ಮಾಪಕರ ಜವಾಬ್ದಾರಿ ಹೆಚ್ಚಿದೆ. ಉತ್ತಮ ಸಂದೇಶ ಸಾರುವ ಚಿತ್ರಗಳ ನಿರ್ಮಾಣಕ್ಕೆ ಚಿತ್ರೋದ್ಯಮ ಮುಂದಾಗಬೇಕು~ ಎಂದರು.
ಹಿರಿಯ ನಟ ಸುಂದರ್ರಾಜ್, `ವಿಕೃತ ಆಲೋಚನೆಗಳನ್ನು ಚಿತ್ರಗಳಲ್ಲಿ ಪ್ರದರ್ಶಿಸುವುದು ಸರಿಯಲ್ಲ. ಸದಭಿರುಚಿಯ ಚಿತ್ರಗಳು ಮೂಡಿಬರಬೇಕು. ಒಳ್ಳೆಯ ಚಿತ್ರಗಳು ಹೇಗಿರುತ್ತವೆ ಎಂಬುದನ್ನು ಮಕ್ಕಳಿಗೆ ತೋರಿಸುವ ಪ್ರಯತ್ನ ಉತ್ತಮವಾಗಿದೆ~ ಎಂದು ಹೇಳಿದರು.
ನಟಿ ಮೇಘನಾ ರಾಜ್, ನಿರ್ದೇಶಕ ತಿಪಟೂರು ರಘು, ಸಂಸ್ಥೆಯ ಅಧ್ಯಕ್ಷ ಎನ್.ಆರ್. ನಂಜುಂಡೇಗೌಡ ಉಪಸ್ಥಿತರಿದ್ದರು.