ಯಲಬುರ್ಗಾ: ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇದೇ ತಿಂಗಳಲ್ಲಿ ಆಚರಿಸಲಿರುವ ವಾರ್ಷಿಕೋತ್ಸವ ಹಾಗೂ ಬೀಳ್ಕೊಡುವ ಸಮಾರಂಭದ ಪ್ರಯುಕ್ತ ವಿವಿಧ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮಂಗಳವಾರ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಸುಮಾರು ಮೂವತ್ತಕ್ಕು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ವಿವಿಧ ಸಾಹಿತ್ಯ ಪ್ರಾಕಾರದ ಗೀತೆಗಳನ್ನು ಹಾಡಿ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.
ತೀರ್ಪುಗಾರರಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದ ಉಪನ್ಯಾಸಕ ಡಾ.ಮಾರ್ಕಂಡಯ್ಯ ಮಾತನಾಡಿ, ಮನಸ್ಸನ್ನು ಸ್ವಾಸ್ಥ್ಯದಿಂದ ಇರುವಂತೆ ನೋಡಿಕೊಳ್ಳುವ ಹಾಗೂ ಚಿಂತೆಗಳನ್ನು ದೂರ ಮಾಡುವ ಶಕ್ತಿಯನ್ನು ಹೊಂದಿರುವ ಸಂಗೀತಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಕಾಲೇಜು ಮಟ್ಟದಲ್ಲಿ ಹೆಚ್ಚಾಗಿ ನಡೆಯುತ್ತಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಶಿವರಾಜ ಗುರಿಕಾರ ಮಾತನಾಡಿ ದರು. ಸಹಾಯಕ ಪ್ರಾಧ್ಯಾಪಕರಾದ ಎ.ಬಿ. ಕೆಂಚರೆಡ್ಡಿ, ರಾಜಶೇಖರ ಪಾಟೀಲ ಹಾಗೂ ಇತರರು ಇದ್ದರು. ಮೇಘಾ ಸೋನಾರ ಪ್ರಾರ್ಥಿಸಿದರು.
ಉಪನ್ಯಾಸಕ ಯು.ಬಿ. ಹಿರೇಮಠ ವಂದಿಸಿದರು. ಉಪನ್ಯಾಸಕರಾದ ಚಂದ್ರಶೇಖರ ಹಿರೇಮನಿ, ಶರಣಗೌಡ ಪಾಟೀಲ, ರಾಜಶೇಖರ, ಜ್ಞಾನೇಶ ಪತ್ತಾರ, ಮೃತ್ಯುಂಜಯ, ಪ್ರದೀಪ ಇದ್ದರು.
ವಿಜೇತರು: ಭಕ್ತಿಗೀತೆ ವಿಭಾಗದಲ್ಲಿ ಮೇಘಾ ಸೋನಾರ, ಶಾಂತಾ ಕುರಿ ಹಾಗೂ ನಾಗಾಶ್ರೀ ಸಿಂಗ್ರಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.