ಮಾನ್ವಿ: ಇಲ್ಲಿನ ಕಾಕತೀಯ ಶಾಲೆಯಲ್ಲಿ ಡಿ.19ರಿಂದ 23ರವರೆಗೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಆಶ್ರಯದಲ್ಲಿ ರಾಜ್ಯಮಟ್ಟದ ಕಬ್ ಮತ್ತು ಬುಲ್ಬುಲ್ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಎನ್.ಎಸ್. ಭೋಸರಾಜು ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 14 ವರ್ಷಗಳ ನಂತರ ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರಾಯಚೂರು ಜಿಲ್ಲಾ ಘಟಕಗಳ ಆಶ್ರಯದಲ್ಲಿ ಉತ್ಸವ ಆಯೋಜಿಸಲಾಗುತ್ತಿದೆ. ವಿವಿಧ ಜಿಲ್ಲೆಗಳ ಸಾವಿರ ವಿದ್ಯಾರ್ಥಿಗಳು ಹಾಗೂ 200ಜನ ಸಿಬ್ಬಂದಿ ಭಾಗವಹಿಸಲಿದ್ದಾರೆ ಎಂದರು.
ವಸ್ತುಪ್ರದರ್ಶನ, ಮಕ್ಕಳ ಸಾಹಸ ಚಟುವಟಿಕೆ, ದೇಶಭಕ್ತಿ, ಶಿಸ್ತು ಮೂಡಿಸುವ ಹಾಗೂ ಪ್ರತಿಭಾ ಪ್ರದರ್ಶನದ ಹಲವು ಕಾರ್ಯಕ್ರಮಗಳು ಜರುಗಲಿವೆ. ಉತ್ಸವಕ್ಕೆ ಬರುವವರಿಗೆ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಜಿಲ್ಲೆ ಹಾಗೂ ತಾಲ್ಲೂಕಿನ ಶಿಕ್ಷಣ
ಪ್ರೇಮಿಗಳು, ದಾನಿಗಳು, ಉದ್ಯಮಿಗಳು ನೆರವು ನೀಡಿದ್ದಾರೆ. ಇದರಿಂದ ಉತ್ಸವದ ಸಿದ್ಧತೆ ಮಾಡಲಾಗಿದೆ ಎಂದು ಹೇಳಿದರು.
ಶಾಸಕ ಜಿ.ಹಂಪಯ್ಯ ನಾಯಕ, ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಶ ಮದ್ಲಾಪುರ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಕೆ.ತಿಮ್ಮಯ್ಯ, ಪುರಸಭೆ ಅಧ್ಯಕ್ಷ ಸೈಯದ್ ನಜೀರುದ್ದೀನ್ ಖಾದ್ರಿ, ಮುಖಂಡರಾದ ಎಂ.ಈರಣ್ಣ, ಜಿ.ನಾಗರಾಜ, ಅಯ್ಯನಗೌಡ ಜಂಬಲದಿನ್ನಿ, ರೌಡೂರು ಮಹಾಂತೇಶ ಸ್ವಾಮಿ ಇದ್ದರು.